ADVERTISEMENT

ಮುಕ್ತ ಚರ್ಚೆ ನಡೆಯಲಿ

ಡಾ.ಹರೀಶ್ ಭಟ್ಟ
Published 9 ಮೇ 2014, 19:30 IST
Last Updated 9 ಮೇ 2014, 19:30 IST
ಮುಕ್ತ ಚರ್ಚೆ ನಡೆಯಲಿ
ಮುಕ್ತ ಚರ್ಚೆ ನಡೆಯಲಿ   

ಮಾನವ ಜೀವಿ­ ಅಸ್ತಿ­ತ್ವಕ್ಕೆ ಪ್ರಕೃತಿ ಹಾಗೂ ಪರಿಸರದ ಸಂರಕ್ಷಣೆ ಅಗತ್ಯ ಎಂಬಂಥ ಪ್ರಜ್ಞೆ ದಿನೇ ದಿನೇ ಬಲಗೊಳ್ಳುತ್ತಿದೆ. ಹೀಗಿದ್ದೂ ಮಾಧವ ಗಾಡ್ಗೀಳ್ ವರದಿ ಎಂದು ಹೆಸರಾದ ಪಶ್ಚಿಮಘಟ್ಟಗಳ ಪರಿಸರ ತಜ್ಞರ ಸಮಿತಿ (WGEEP) ವರದಿ ಹಾಗೂ ಕಸ್ತೂರಿ ರಂಗನ್ ವರದಿ ಎಂದು ಹೆಸರಾದ ಉನ್ನತ ಮಟ್ಟದ  ಕಾರ್ಯತಂಡ (HLWG) ವರದಿ­ಗಳಿಗೆ  ಎಲ್ಲಾ ಜನ ವರ್ಗಗಳಿಂದ  ವಿರೋಧ ವ್ಯಕ್ತವಾದವು.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಿಂದ ನೇಮಕಗೊಂಡ ಗಾಡ್ಗೀಳ್ ಸಮಿತಿಯಲ್ಲಿ 14 ಸದಸ್ಯರಿದ್ದರು. ಒಂದೂವರೆ ವರ್ಷ ಅವಧಿಯಲ್ಲಿ 14 ಸಭೆಗಳನ್ನು ನಡೆಸಿದ ಈ ಸಮಿತಿ ಅಂತಿಮ ವರದಿಯನ್ನು 2011ರ ಆಗಸ್ಟ್ 31ರಂದು ನೀಡಿತು.

ಹೆಚ್ಚು ಪರಿಸರ ಸ್ನೇಹಿಯಾಗಿರುವ ಈ ವರದಿ, ಜನಜೀವನದ ವಾಸ್ತವ ಸಂಗತಿ­ಗಳಿಗೆ ವಿರುದ್ಧವಾಗಿದೆ ಎಂಬಂಥ ಟೀಕೆ­ಗಳು ವ್ಯಕ್ತವಾದವು. ಹೀಗಾಗಿ 2012ರ ಮಾರ್ಚ್ ತಿಂಗಳಲ್ಲಿ ಈ ವರದಿಯನ್ನು ಸಾರ್ವಜನಿಕಗೊಳಿಸಿದಾಗ ವ್ಯಾಪಕ ವಿರೋಧ ವ್ಯಕ್ತವಾಯಿತು.  ಪ್ರಕೃತಿ ಹಾಗೂ ಪರಿಸರದ ಸಂರಕ್ಷಣೆ­ಗಾಗಿ ನೀಡಿ­ರುವ ಕೆಲವು ಶಿಫಾರಸುಗಳು ಸ್ಥಳೀಯ ನಾಗರಿಕರ ಮೂಲಭೂತ ಹಕ್ಕುಗಳು ಹಾಗೂ ಅವರ ಜೀವ­ನೋಪಾ­ಯ­ಗಳಿಗೆ ಮಾರಕ­ವಾಗಿದ್ದು ಇದು ಸ್ಥಳೀಯ ಅಭಿವೃದ್ಧಿಗೆ ಅಡ್ಡಗಾಲಾ­ಗುತ್ತದೆ ಎಂಬಂಥ ಟೀಕೆಗಳು ವ್ಯಕ್ತವಾ­ದವು.
ವಾಸ್ತವವಾಗಿ ಪಶ್ಚಿಮ ಘಟ್ಟ ಪರಿಸರ ಪ್ರಾಧಿಕಾರ (WGEA) ರಚನೆ­ಗೂ ಈ ಆಯೋಗ ಶಿಫಾರಸು ಮಾಡಿತ್ತು..

ಆದರೆ  ಈ ವರದಿಗೆ ತೀವ್ರ ಪ್ರತಿರೋಧ ಎದುರಾದದ್ದರಿಂದ 2012ರ ಆಗಸ್ಟ್ 17ರಂದು ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡವನ್ನು ರಚಿಸಲಾಯಿತು.   10 ಸಭೆಗಳು ಹಾಗೂ ನಾಲ್ಕು ಕ್ಷೇತ್ರ ಕಾರ್ಯ ಭೇಟಿಗಳ ನಂತರ ಈ ಕಾರ್ಯತಂಡ 2013ರ ಏಪ್ರಿಲ್ 15ರಂದು ವರದಿ ಸಲ್ಲಿಸಿತು.  ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆ ಕಾಳಜಿಗಳ ಸಮತೋಲನಕ್ಕೆ ಕಸ್ತೂರಿ ರಂಗನ್ ಸಮಿತಿ ವರದಿ ಪ್ರಯತ್ನಿಸಿದೆ. ಈ ಪ್ರಕ್ರಿಯೆಯಲ್ಲಿ ಪರಿಸರ ರಕ್ಷಣೆ ನಿಯಂತ್ರಣ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ.

ಮಾಧವ ಗಾಡ್ಗೀಳ್ ಸಮಿತಿ ವರದಿಯನ್ನು ಸಮಗ್ರವಾಗಿ ಅಂತರ್ ಶಿಸ್ತೀಯ ನೆಲೆಗಳಲ್ಲಿ ಅಧ್ಯಯನ ಮಾಡಿ ಅದರ ಪರಿ­ಣಾ­ಮ­ಕಾರಿ ಅನುಷ್ಠಾನಕ್ಕೆ ಕ್ರಿಯಾ­ಯೋಜನೆ­ಯನ್ನು ಸಲ್ಲಿಸ­­ಬೇಕೆಂಬ ಹೊಣೆಗಾರಿಕೆ­ಯನ್ನು ಕಸ್ತೂರಿ ರಂಗನ್ ಸಮಿತಿಗೆ ನೀಡಲಾಗಿತ್ತು. ಪಶ್ಚಿಮ ಘಟ್ಟದ ಶೇ 64ರಷ್ಟು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು (ಇಎಸ್ಎ) ಗಾಡ್ಗೀಳ್ ವರದಿ   ಸೂಚಿಸಿತ್ತು. ಆದರೆ ಶೇ 37ರಷ್ಟು ಪ್ರದೇಶಗಳನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶಗಳೆಂದು  ಕಸ್ತೂರಿ ರಂಗನ್ ವರದಿ  ಪ್ರತಿಪಾದಿಸಿತು.  ಸ್ಥಳೀಯ ನಿವಾಸಿಗಳು ಹಾಗೂ ರೈತ ಚಳವಳಿಗಳು ಎತ್ತಿದ್ದಂತಹ ಕಾಳಜಿಗಳನ್ನು ನಿರ್ವಹಿಸುವಲ್ಲಿ ಕಸ್ತೂರಿ ರಂಗನ್ ಸಮಿತಿ ವಿಫಲವಾಯಿತು.

ಈ ಸಮಿತಿ ಮಾಡಿದ ಅನೇಕ ತಿದ್ದುಪಡಿಗಳು,  ಮಾಧವ ಗಾಡ್ಗೀಳ್ ಸಮಿತಿಯ ಅನೇಕ ಶಿಫಾರಸುಗಳನ್ನು ದುರ್ಬಲಗೊಳಿಸಿತು.  ಪರಿಸರ ಸೂಕ್ಷ್ಮ ಪ್ರದೇಶಗಳೆಂದು (ಇಎಸ್ಎ) ಕಸ್ತೂರಿ ರಂಗನ್ ಸಮಿತಿ ಗುರುತಿಸಿ ಗಡಿರೇಖೆ ಎಳೆದಿರುವ ಕ್ರಮವೇ ಅವೈಜ್ಞಾನಿಕವಾಗಿದ್ದು ಇಂತಹ ಪ್ರದೇಶಗಳ ಗುರುತಿಸುವಿಕೆಗೆ ಸರಿಯಾದ ಸಮೀಕ್ಷಾ ಕಾರ್ಯ ನಡೆದಿಲ್ಲ. ಇಎಸ್ಎ  ಗಡಿ ಗುರುತಿಸಲು ಕಂದಾಯ ಗ್ರಾಮಗಳ ಗಡಿಗಳನ್ನು  ಕಸ್ತೂರಿ ರಂಗನ್ ಸಮಿತಿ ಅಳವಡಿಸಿಕೊಂಡಿರುವುದು ಅವೈಜ್ಞಾ­ನಿಕ. ಪ್ಲಾಂಟೇಷನ್ ಪ್ರದೇಶಗಳನ್ನು ಅರಣ್ಯಗಳೆಂದು  ವೈಮಾನಿಕ ಸಮೀಕ್ಷೆ­ಗಳು ತಪ್ಪಾಗಿ ಗುರುತಿಸಿವೆ. ಹಾಗೆಯೇ ಹೆಚ್ಚು ಜನದಟ್ಟಣೆ ಇರುವ ಪ್ರದೇಶ­ಗಳನ್ನೂ ಇಎಸ್ಎ ಎಂದು ಕಸ್ತೂರಿ ರಂಗನ್ ವರದಿ ಗುರುತಿಸಿದೆ. ವಾಸ್ತವ­ವಾಗಿ  ಚದರ ಕಿ.ಮೀ.ಗೆ 100ಕ್ಕೂ ಕಡಿಮೆ ಜನ ದಟ್ಟಣೆ ಇದ್ದಲ್ಲಿ  ಅದನ್ನು  ಇಎಸ್ಎ ಎಂದು ಗುರುತಿಸ­ಲಾಗುತ್ತದೆ.

ಇಂತಹ ಶಿಫಾರಸುಗಳನ್ನು ಅನು­ಷ್ಠಾನ­ಗೊಳಿಸುವಾಗ  ಆಯಾ ರಾಜ್ಯ ಸರ್ಕಾರಗಳು ಹೆಚ್ಚು ನಿಗಾ ವಹಿಸುವುದು ಅಗತ್ಯ. ಪರಿಸರ ಹಾಗೂ ಅಭಿವೃದ್ಧಿ ಮಧ್ಯದ ಸಮತೋಲನ ಕಾಯ್ದು-­ಕೊಳ್ಳುವುದು ಅತ್ಯಗತ್ಯ.  

ಪ್ರಕೃತಿಯ ರಕ್ಷಣೆ ಜೊತೆಜೊತೆಗೇ ಜನರು ಹಾಗೂ ರಾಷ್ಟ್ರದ ಹಿತ­ದೃಷ್ಟಿಯಿಂದ ಸುಸ್ಥಿರ ಅಭಿವೃದ್ಧಿಯ ದೃಷ್ಟಿ­ಕೋನ ಇಲ್ಲಿ ಮುಖ್ಯವಾದುದು. ವರದಿಯ ಶಿಫಾರಸುಗಳ ಬಗ್ಗೆ ಸಾರ್ವ­ಜನಿಕ ವಲಯದಲ್ಲಿ  ಹೆಚ್ಚಿನ ಮುಕ್ತ ಚರ್ಚೆಗಳು ನಡೆಯುವುದು ಅಗತ್ಯ.
(ಲೇಖಕರು ಪರಿಸರ ಸಂರಕ್ಷಣೆ ಅಧ್ಯಯನದಲ್ಲಿ ತೊಡಗಿಕೊಂಡಿರುವ ವಿಜ್ಞಾನಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.