ಅವರು ಕಾಣುವ ಲೋಕವನ್ನು ನಾವು ಕಾಣಲಾಗದು. ಅವರ ಲೋಕ ನಮಗಿಂತ ಭಿನ್ನ. ಹಾಗಾಗಿಯೇ ಅವರು ಹೇಳೋದು ‘ಲೋಕನಾ ನಮ್ಮಂಗೆ ನೋಡೋರು ಯಾರಿಲ್ಲ...’ ಏ.20ರಂದು ತೆರೆ ಕಂಡಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ‘ಸಂಚಾರಿ’ ವಿಜಯ್ ಅಭಿನಯದ ‘ಕೃಷ್ಣ ತುಳಸಿ’ ಸಿನಿಮಾದ ಹಾಡಿನ ಸಾಲುಗಳಿವು.
ಯೋಗರಾಜ ಭಟ್ ಬರೆದಿರುವ ಈ ಹಾಡಿನ ಸಾಲುಗಳು ಅಂಧರ ಲೋಕದ ಚಿತ್ರವನ್ನು ಅರ್ಥಪೂರ್ಣವಾಗಿ ಅನಾವರಣ ಮಾಡುತ್ತವೆ. ಈ ಹಾಡಿನ ಒಂದೊಂದು ಪದವೂ ಹೊರಗಣ್ಣು ಮತ್ತು ಒಳಗಣ್ಣಿನ ಲೋಕವನ್ನು ತೆರೆದಿಡುವಂತಿವೆ. ಲವಲವಿಕೆಯನ್ನು ಹಾಸು ಹೊದ್ದಿರುವ ಈ ಹಾಡಿನಲ್ಲಿ ವಿಜಯ್, ತಬಲಾ ನಾಣಿ ಮತ್ತು ಸ್ನೇಹಿತರ ಬಳಗ ನೋಡುಗರನ್ನು ಆವರಿಸುತ್ತಾರೆ. ಮಧ್ಯೆ ಮಧ್ಯೆ ಬರುವ ತಮಾಷೆಯ ಪ್ರಸಂಗಗಳು ನಗಿಸುತ್ತವೆ.
ಒಳಗಣ್ಣು ತೆರೆದುಕೊಂಡವರು ನಾವುಗಳು. ಕಣ್ಣಿದ್ದೂ ಕುರುಡು ನೀವುಗಳು. ನಮ್ಮ ಕಣ್ಣನಲ್ಲಿ ದೇವರಿದ್ದಾನೆ ಅದಕ್ಕೆ ನಾವು ಹಾಕಿಕೊಂಡೆವು ಬಾಗಿಲು. ದಂ ಇದ್ದರೆ ನೀವು ಹತ್ತು ನಿಮಿಷ ನಮ್ಮ ಥರಾ ಇರಿ ಅಂತ ಸವಾಲೆಸೆಯುವ ಸಾಲುಗಳು ದೃಷ್ಟಿ ಇದ್ದವರನ್ನು ಕೆಣಕುವಂತಿವೆ. ಯಾರ ಸಹಾಯವೂ ಪಡೆಯದೇ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವ ಅಂಧರು, ಎಲ್ಲವನ್ನೂ ಸ್ಪರ್ಶದ ಮೂಲಕವೇ ಅನುಭೂತಿ ಪಡೆಯುವ ಅನನ್ಯ ಲೋಕವೂ ಇಲ್ಲಿ ಕಾಣಸಿಗುತ್ತದೆ. ಗಿಲೀಟಿನ ಲೋಕದ ಮಂದಿಯನ್ನು ಲೇವಡಿ ಮಾಡುವ ಅಂಧರು ನೀವೆಲ್ಲಾ ನಕಲಿ, ನಾವೇ ಅಸಲಿ ಎನ್ನುತ್ತಾರೆ. ಜಾಲಿಯಾಗಿ ಸಾಗುವ ಹಾಡು, ಹಿತವಾಗಿ ಕಾಲೆಳೆಯುತ್ತಲೇ ನೋಡುಗರನ್ನು ಆವರಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.