ADVERTISEMENT

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಸೆಹ್ವಾಗ್, ಜಹೀರ್ ಖಾನ್‌ಗೆ ವಿಶ್ರಾಂತಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಸೆಹ್ವಾಗ್, ಜಹೀರ್ ಖಾನ್‌ಗೆ ವಿಶ್ರಾಂತಿ
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಸೆಹ್ವಾಗ್, ಜಹೀರ್ ಖಾನ್‌ಗೆ ವಿಶ್ರಾಂತಿ   

ಮುಂಬೈ (ಪಿಟಿಐ): ಪ್ರದರ್ಶನ ಮಟ್ಟವನ್ನು ಸ್ಥಿರವಾಗಿ ಕಾಯ್ದುಕೊಂಡು ಹೋಗುವಲ್ಲಿ ಕಷ್ಟಪಡುತ್ತಿರುವ ಸಚಿನ್ ತೆಂಡೂಲ್ಕರ್‌ಗೆ `ಶತಕಗಳ ಶತಕ~ ಗಳಿಸಲು ಈಗ ಮತ್ತೊಂದು ಅವಕಾಶ ಲಭಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಈ ಆಟಗಾರನನ್ನು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹಾಗೂ ಎಡಗೈ ವೇಗಿ ಜಹೀರ್ ಖಾನ್ ಅವರಿಗೆ `ವಿಶ್ರಾಂತಿ~ ನೀಡಲಾಗಿದೆ. ಸೆಹ್ವಾಗ್ ಅಲಭ್ಯರಾದ ಕಾರಣ ಭರವಸೆಯ ಬ್ಯಾಟ್ಸ್‌ಮನ್ ಎನಿಸಿರುವ ವಿರಾಟ್ ಕೊಹ್ಲಿ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. 

 ಮಾರ್ಚ್ 11ರಿಂದ 22ರ ವರೆಗೆ ಬಾಂಗ್ಲಾದೇಶದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ, ಆತಿಥೇಯ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ.

29 ವರ್ಷದ ಬರೋಡಾದ ಆಲ್‌ರೌಂಡರ್ ಯುಸೂಫ್ ಪಠಾಣ್ ಹಾಗೂ ಬಂಗಾಳದ ಅಶೋಕ್ ದಿಂಡಾ ಅವರಿಗೂ ತಂಡದಲ್ಲಿ ಸ್ಥಾನ ಲಭಿಸಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಕೆ. ಶ್ರೀಕಾಂತ್ ನೇತೃತ್ವದ ಸಮಿತಿ ಏಷ್ಯಾ ಕಪ್‌ಗೆ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಬುಧವಾರ ಆಯ್ಕೆ ಮಾಡಿತು.

ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗಿ ಉಮೇಶ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ. ಕಾರಣ ಈ ಬಲಗೈ ವೇಗಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಯುಸೂಫ್ ದೇಶಿಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಅವರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿಕೊಂಡಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಆಟಗಾರ 10 ಸಿಕ್ಸರ್ ಹಾಗೂ 10 ಬೌಂಡರಿ ಸಮೇತ ಶತಕ ಸಿಡಿಸಿದ್ದರು. ಇದರಿಂದ ಸೌರಾಷ್ಟ್ರ ತಂಡ ಗೆಲುವು ಸಾಧಿಸಿತ್ತು. ಇದು ಆಯ್ಕೆದಾರರ ಗಮನ ಸೆಳೆದಿದೆ. ದೇಶಿಯ ಟೂರ್ನಿಗಳಲ್ಲಿ ದಿಂಡಾ ನೀಡಿದ ಪ್ರದರ್ಶನ ಬಲಗೈ ಬ್ಯಾಟ್ಸ್‌ಮನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರಕಿಸಿ ಕೊಟ್ಟಿದೆ.

ಆಸೀಸ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಅವರಿಗೂ ಸ್ಥಾನ ಲಭಿಸಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಸಂಜಯ್ ಜಗದಾಳೆ ಆಯ್ಕೆ ಸಮಿತಿ ಸಭೆ ನಂತರ ಮಾಧ್ಯಮದವರಿಗೆ ತಿಳಿಸಿದರು. ಕನ್ನಡಿಗ ಆರ್. ವಿನಯ್ ಕುಮಾರ್ ಸಹ ತಂಡದಲ್ಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.