ಬ್ಯಾಡಗಿ (ಹಾವೇರಿ): ಬೆಂಗಳೂರಿನ ಸಿಐಎಲ್ ತಂಡ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.
ಆದಿಶಕ್ತಿ ಕ್ರೀಡಾ ಸಮಿತಿ, ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ತೀರ್ಪುಗಾರರ ಮಂಡಳಿ ಸಹಯೋಗದಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಬುಧವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಿಐಎಲ್ ತಂಡ 29–4 ಪಾಯಿಂಟ್ಸ್ನಿಂದ ತಮಿಳುನಾಡಿನ ಜಿಕೆಎಂ ಎದುರು ಜಯಿಸಿ ಆದಿಶಕ್ತಿ ಟ್ರೋಫಿ ಮತ್ತು ₹ 1 ಲಕ್ಷ ನಗದನ್ನು ತನ್ನದಾಗಿಸಿಕೊಂಡಿತು.
ಮೊದಲರ್ಧದ ಆಟ ಮುಗಿದಾಗ ಸಿಐಎಲ್ ತಂಡ 21–3ರಲ್ಲಿ ಮುನ್ನಡೆ ಹೊಂದಿತ್ತು. ಎರಡನೇ ಅವಧಿಯಲ್ಲಿಯೂ ಚುರುಕಿನ ಪ್ರದರ್ಶನ ಮುಂದುವರಿಸಿತು. ರಕ್ಷಣಾ ವಿಭಾಗದಲ್ಲಿ ಭದ್ರಕೋಟೆ ಕಟ್ಟಿತು. ಈ ಅವಧಿಯಲ್ಲಿ ಎದುರಾಳಿ ತಂಡಕ್ಕೆ ಒಂದು ಪಾಯಿಂಟ್ ಮಾತ್ರ ಬಿಟ್ಟುಕೊಟ್ಟಿತು.
ಸೆಮಿಫೈನಲ್ ಪಂದ್ಯಗಳಲ್ಲಿ ಸಿಐಎಲ್ ತಂಡ 50–37ರಲ್ಲಿ ದೆಹಲಿಯ ಡಿಜಿಕ್ಯೂಎ ಮೇಲೂ, ತಮಿಳುನಾಡಿನ ತಂಡ 43–27ರಲ್ಲಿ ಬೆಂಗಳೂರಿನ ರೈಲು ಗಾಲಿ ಕಾರ್ಖಾನೆ (ಆರ್ಡಬ್ಲ್ಯುಎಫ್) ವಿರುದ್ಧ ಗೆದ್ದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.