ಬ್ಯಾಡಗಿ (ಹಾವೇರಿ ಜಿಲ್ಲೆ): ರೈಲು ಗಾಲಿ ಕಾರ್ಖಾನೆ (ಆರ್ಡಬ್ಲುಎಫ್), ತಮಿಳುನಾಡು ಮತ್ತು ಡಿಜಿಕ್ಯೂಎ ತಂಡಗಳು ಇಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ.
ಬ್ಯಾಡಗಿ ತಾಲ್ಲೂಕಿನ ಮೋಟೆ ಬೆನ್ನೂರ ಗ್ರಾಮದಲ್ಲಿ ಆದಿಶಕ್ತಿ ಕ್ರೀಡಾ ಸಮಿತಿ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ತೀರ್ಪುಗಾರರ ಮಂಡಳಿಯ ಸಹಯೋಗದಲ್ಲಿ ಟೂರ್ನಿ ನಡೆಯುತ್ತಿದೆ. ಬುಧವಾರ ರಾತ್ರಿ ನಡೆದ ಎಂಟರ ಘಟ್ಟದ ಪಂದ್ಯಗಳಲ್ಲಿ ಆರ್ಡಬ್ಲ್ಯುಎಫ್ 32–5ರಿಂದ ಎಚ್ಎಂಟಿ ಮೇಲೂ, ತಮಿಳುನಾಡಿನ ಜಿಕೆಎನ್ ತಂಡ 29–7ರಲ್ಲಿ ಶಿಗ್ಗಾವಿಯ ಸ್ವಾತಿ ತಂಡದ ವಿರುದ್ಧವೂ, ಡಿಜಿಕ್ಯೂಎ 31–18ರಲ್ಲಿ ರಾಣೆಬೆನ್ನೂರಿನ ತಂಡಗಳ ಎದುರು ಜಯ ಸಾಧಿಸಿದವು.
ಲೀಗ್ ಹಂತದ ಪಂದ್ಯದಲ್ಲಿ ಜಿಕೆಎನ್ ತಂಡ 33–16 ಪಾಯಿಂಟ್ಸ್ನಿಂದ ಬೆಂಗಳೂರಿನ ಜ್ಯೋತಿ ತಂಡದ ಎದುರು ಜಯಪಡೆದಿತ್ತು. ವಿಜಯಿ ತಂಡ ಮೊದಲರ್ಧದ ಆಟ ಮುಗಿದಾಗ 12 ಪಾಯಿಂಟ್ಸ್ನಿಂದ ಮುನ್ನಡೆ ಹೊಂದಿತ್ತು. ಎರಡನೇ ಅವಧಿಯಲ್ಲಿ ಚುರುಕಿನ ಆಟ ಮುಂದುವರಿಸಿ ಜಯದ ಅಂತರ ಹೆಚ್ಚಿಸಿಕೊಂಡಿತು.
ಇನ್ನಷ್ಟು ಲೀಗ್ ಪಂದ್ಯಗಳಲ್ಲಿ ಜ್ಯೋತಿ ತಂಡ 26–13ರಲ್ಲಿ ಮಹಾ ರಾಷ್ಟ್ರ ಪೊಲೀಸ್ ಮೇಲೂ, ಡಿಜಿಕ್ಯೂಎ ತಂಡ 24–4ರಲ್ಲಿ ಬಾಗಲಕೋಟೆಯ ಚಾಮುಂಡೇಶ್ವರ ವಿರುದ್ಧವೂ, ಎಚ್ಎಂಟಿ ತಂಡ 15–10ರಲ್ಲಿ ಬಾಗಲಕೋಟೆ ಮೇಲೂ, ಆರ್ಡಬ್ಲ್ಯುಎಫ್ 33–10ರಲ್ಲಿ ರಾಣೆಬೆನ್ನೂರ ವಿರುದ್ಧವೂ ಜಯ ಸಾಧಿಸಿತ್ತು. ಎರಡನೇ ಲೀಗ್ ಪಂದ್ಯದಲ್ಲಿ ಆರ್ಡಬ್ಲ್ಯುಎಫ್ 27–10ರಲ್ಲಿ ಮೋಟೆಬೆನ್ನೂರಿನ ಆದಿಶಕ್ತಿ ತಂಡವನ್ನು ಮಣಿಸಿತು.
ಧಾರವಾಡದ ಭಾರತ ಕ್ರೀಡಾ ಪ್ರಾಧಿಕಾರ ತಂಡ 42–17 ಪಾಯಿಂಟ್ಸ್ನಿಂದ ಆದಿಶಕ್ತಿ ಎದುರು ಜಯ ಪಡೆಯಿತು.
ಆದರೆ ಇನ್ನೊಂದು ಪಂದ್ಯದಲ್ಲಿ 12–18 ರಲ್ಲಿ ರಾಣೆಬೆನ್ನೂರ ವಿರುದ್ಧ ಪರಾಭವಗೊಂಡಿತು. ಉಡುಪಿ ತಂಡ 24–19ರಲ್ಲಿ ಶಿಗ್ಗಾವಿಯ ಸ್ವಸ್ತಿಕ್ ಮೇಲೂ, ಬೆಂಗಳೂರಿನ ಕಸ್ಟಮ್ಸ್ ತಂಡ 19–8ರಲ್ಲಿ ಉಡುಪಿ ವಿರುದ್ಧವೂ ಗೆಲುವು ಪಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.