ನವದೆಹಲಿ: ‘ಮುಂಬರುವ ಕಾಮನ್ವೆಲ್ತ್ ಕೂಟದಿಂದ ಶೂಟಿಂಗ್ ಸ್ಪರ್ಧೆಯನ್ನು ತೆಗೆದು ಹಾಕಿದರೆ, ಭಾರತವು ಕೂಟದಿಂದಲೇ ಹಿಂದೆ ಸರಿಯಲಿದೆ ಎಂಬ ಹೇಳಿಕೆಯು ಅತಿರೇಕತನದಿಂದ ಕೂಡಿದೆ’ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.
ಮುಂದಿನ ಕಾಮನ್ವೆಲ್ತ್ ಕೂಟ ಬರ್ಮಿಂಗ್ಹ್ಯಾಂನಲ್ಲಿ ನಡೆಯಲಿದೆ. ಆ ಕೂಟದಲ್ಲಿ ಶೂಟಿಂಗ್ ಬೇಕೇ ಬೇಡವೇ ಎಂಬುದನ್ನು ಆತಿಥೇಯರು ನಿರ್ಧರಿಸಬೇಕು ಎಂದು ಕಾಮನ್ವೆಲ್ತ್ ಕೂಟದ ಫೆಡರೇಷನ್ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ರಾಷ್ಟ್ರೀಯ ರೈಫಲ್ ಸಂಸ್ಥೆಯ ಅಧ್ಯಕ್ಷ ರಣಿಂದರ್ ಸಿಂಗ್ ಅವರು, ಒಂದು ವೇಳೆ ಶೂಟಿಂಗ್ ಕೈಬಿಟ್ಟರೆ ಭಾರತ ಕೂಟವನ್ನೇ ಬಹಿಷ್ಕರಿಸ
ಬೇಕಾದೀತು ಎಂದು ಹೇಳಿದ್ದರು.
‘ತಮ್ಮ ಅಭಿಪ್ರಾಯ ಹೇಳಲು ರಣಿಂದರ್ ಸ್ವತಂತ್ರರು. ಅವರ ಕಾಳಜಿ ಅರ್ಥವಾಗುತ್ತದೆ. ಈ ವಿಷಯದ ಬಗ್ಗೆ ಖಂಡಿತವಾಗಿಯೂ ಉನ್ನತ ಮಟ್ಟದಲ್ಲಿ ಚರ್ಚಿಸಬೇಕಿದೆ. ಆದರೆ, ಇದಕ್ಕಾಗಿ ಕೂಟದಿಂದಲೇ ಹಿಂದೆ ಸರಿಯಬೇಕೆಂದು ಹೇಳುವುದು ಅತಿರೇಕ’ ಎಂದು ಬಾತ್ರಾ ಅಭಿಪ್ರಾಯಪಟ್ಟಿದ್ದಾರೆ.
ಕಾಮನ್ವೆಲ್ತ್ ಫೆಡರೇಷನ್ನ ಸೂಚನೆ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ಅನುಭವಿ ಶೂಟರ್ ಜಿತು ರಾಯ್ ಅವರು ‘ಈ ನಿರ್ಧಾರದಿಂದ ಯುವ ಶೂಟರ್ಗಳಿಗೆ ಹಿನ್ನಡೆ ಉಂಟಾಗಲಿದೆ’ ಎಂದು ಬುಧವಾರ ಪ್ರತಿಕ್ರಿಯಿಸಿದ್ದರು.
ಈ ಸಲದ ಕೂಟದಲ್ಲಿ ಭಾರತದ ಶೂಟಿಂಗ್ ಕ್ರೀಡಾಪಟುಗಳು ಒಟ್ಟು 16 ಪದಕಗಳನ್ನು ಜಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.