ADVERTISEMENT

ಕೆಎಸ್‌ಸಿಎ–ಮೈಸೂರು ವಿ.ವಿ ಒಡಂಬಡಿಕೆ

ಗ್ಲೇಡ್ಸ್‌ ಮಾದರಿಯಲ್ಲಿ ಮಹಾರಾಜ ಕಾಲೇಜಿನ ಮೈದಾನ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 19:30 IST
Last Updated 22 ಜೂನ್ 2015, 19:30 IST
ಮೈಸೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಅವರಿಗೆ ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹಸ್ತಲಾಘವ ಮಾಡಿದರು. ಕುಲಸಚಿವ ಪ್ರೊ.ಸಿ. ಬಸವರಾಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ಕೃಷ್ಣ, ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಎಸ್‌. ಬಾಲಚಂದರ್‌ ಹಾಗೂ ಕೆಎಸ್‌ಸಿಎ ಅಧ್ಯಕ್ಷ ಆರ್‌. ಅಶೋಕಾನಂದ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಅವರಿಗೆ ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹಸ್ತಲಾಘವ ಮಾಡಿದರು. ಕುಲಸಚಿವ ಪ್ರೊ.ಸಿ. ಬಸವರಾಜು, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ಕೃಷ್ಣ, ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಎಸ್‌. ಬಾಲಚಂದರ್‌ ಹಾಗೂ ಕೆಎಸ್‌ಸಿಎ ಅಧ್ಯಕ್ಷ ಆರ್‌. ಅಶೋಕಾನಂದ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ಗ್ಲೇಡ್ಸ್‌ ಮಾದರಿಯಲ್ಲಿ ಮಹಾರಾಜ ಕಾಲೇಜಿನ ಐತಿಹಾಸಿಕ ಕ್ರಿಕೆಟ್‌ ಮೈದಾನವನ್ನು ಅಭಿವೃದ್ಧಿಪಡಿ ಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿವೆ.

ವಿಶ್ವವಿದ್ಯಾಲಯದ ಕ್ರಾಫರ್ಡ್‌ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಹಾಗೂ ಮೈಸೂರು ವಿ.ವಿ ಕುಲಸಚಿವ ಪ್ರೊ.ಸಿ. ಬಸವರಾಜು ಒಡಂಬಡಿಕೆಗೆ ಸಹಿ ಹಾಕಿದರು.

23 ವರ್ಷಗಳ ಅವಧಿಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೈದಾನ ಅಭಿವೃದ್ಧಿ ಹಾಗೂ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಕ್ರಿಕೆಟ್‌ ಸಂಸ್ಥೆ ಹೊತ್ತಿದೆ. 10ಟರ್ಫ್‌ ಪಿಚ್‌ಗಳ ನಿರ್ಮಾಣ (ಪಂದ್ಯಗಳಿಗೆ 5, ಅಭ್ಯಾಸಕ್ಕೆ 5 ಪಿಚ್‌), ಪೆವಿಲಿಯನ್‌, ಕಚೇರಿ, ಕಾಂಪೌಂಡ್‌ ಹಾಗೂ ಅಂಗಳದಲ್ಲಿ ಹುಲ್ಲುಹಾಸು ನಿರ್ಮಾಣ ಮಾಡುವುದಾಗಿ ಒಡಂಬಡಿಕೆ ಪತ್ರದಲ್ಲಿ ಕೆಎಸ್‌ಸಿಎ ಹೇಳಿದೆ. ಜೊತೆಗೆ, ವಿಶ್ವವಿದ್ಯಾಲಯದ ಕ್ರಿಕೆಟ್‌ ಚಟುವಟಿಕೆ ಗಳಿಗೂ ಅವಕಾಶ ಮಾಡಿಕೊಡಲಿದೆ.

ಕ್ರಿಕೆಟ್‌ ಸಂಸ್ಥೆಯು ಮೈಸೂರಿನಲ್ಲಿ ಈಗಾಗಲೇ ಗ್ಲೇಡ್ಸ್‌ ಕ್ರೀಡಾಂಗಣ ಹಾಗೂ ಜಯಚಾಮರಾಜೇಂದ್ರ ಎಂಜಿನಿಯ ರಿಂಗ್‌ ಕಾಲೇಜಿನ ಕ್ರೀಡಾಂಗಣದ ಉಸ್ತುವಾರಿ ವಹಿಸಿಕೊಡು ಅಭಿವೃದ್ಧಿಪಡಿಸಿದೆ. ಈಗ ಒಡಂಬಡಿಕೆ ಮಾಡಿಕೊಂಡಿರುವುದು ಮೂರನೇ ಮೈದಾನ. 

ಒಡಂಬಡಿಕೆ ಬಳಿಕ ಮಾತನಾಡಿದ ಮೈಸೂರು ವಿ.ವಿ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ, ‘ಕ್ರಿಕೆಟ್‌ ಸಂಸ್ಥೆಯವರು ಈಗಾಗಲೇ ಗ್ಲೇಡ್ಸ್‌ ಕ್ರೀಡಾಂಗಣವನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಅಂಗಳದಲ್ಲಿ ಆಯೋಜಿಸಿದ ಕೆಪಿಎಲ್‌ ಪಂದ್ಯಗಳನ್ನು ವೀಕ್ಷಿಸಿ ಖುಷಿಪಟ್ಟವರಲ್ಲಿ ನಾನು ಕೂಡ ಒಬ್ಬ. ಕೆಎಸ್‌ಸಿಎ ಜೊತೆಗೂಡಿ ಕೆಲಸ ಮಾಡಲು ವಿ.ವಿ ಸಿದ್ಧವಾಗಿದೆ’ ಎಂದರು.

ಕೆಎಸ್‌ಸಿಎ ಅಧ್ಯಕ್ಷ ಆರ್‌. ಅಶೋಕಾನಂದ ಅವರು, ‘ಮಹಾರಾಜ ಕಾಲೇಜಿನ ಈ ಮೈದಾನದಲ್ಲಿ ಆಡಿದ ಅನುಭವ ನನಗಿದೆ. ಶಫಿ ದಾರಾಶಾ, ಪಾರ್ಥಸಾರಥಿ, ಜಾವಗಲ್‌ ಶ್ರೀನಾಥ್‌ ಈ ಮೈದಾನದಲ್ಲಿ ಒಡಮೂಡಿದ ಪ್ರತಿಭೆಗಳು. ಈ ಮೈದಾನವನ್ನು ಗ್ಲೇಡ್ಸ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸ ಲಾಗುವುದು’ ಎಂದು ಭರವಸೆ ನೀಡಿದರು.

ಪ್ರಥಮದರ್ಜೆ ಪಂದ್ಯ ಆಯೋಜನೆ: ‘ಬೆಂಗಳೂರು ಹೊರತುಪಡಿಸಿದರೆ ಹೆಚ್ಚು ಕ್ರಿಕೆಟ್‌ ಚಟುವಟಿಕೆಗಳು ನಡೆ ಯುವ ತಾಣ ಮೈಸೂರು. ಪ್ರಥಮದರ್ಜೆ ಪಂದ್ಯ ಆಡಲು ಸಾಧ್ಯವಾಗುವಂತೆ ಈ ಮೈದಾನ ಅಭಿವೃದ್ಧಿಪಡಿಸಲಿದ್ದೇವೆ. ಗ್ಲೇಡ್ಸ್‌ಗೆ ಹೋಲಿಸಿದರೆ ಈ ಮೈದಾನ ಚಿಕ್ಕದು. ಆದರೆ, ಸುಂದರ ಕ್ರೀಡಾಂಗಣ ವನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆ ಇದೆ’ ಎಂದು ಬ್ರಿಜೇಶ್‌ ತಿಳಿಸಿದರು.
 

150 ವರ್ಷಗಳ ಇತಿಹಾಸ...
ಮಹಾರಾಜ ಕಾಲೇಜಿನ ಕ್ರಿಕೆಟ್ ಮೈದಾನಕ್ಕೆ 150 ವರ್ಷಗಳ ಇತಿಹಾಸವಿದೆ. ಇದನ್ನು ಆಗ ಅಭಿವೃದ್ಧಿಪಡಿಸಿದ್ದು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದ ಜೆ.ಸಿ. ರೋಲೊ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣಕ್ಕೆ ಮುನ್ನ ಇಲ್ಲಿ ರಣಜಿ ಪಂದ್ಯಗಳು ನಡೆಯುತ್ತಿದ್ದವು. ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಇಲ್ಲಿನ ಮ್ಯಾಟ್‌ ಪಿಚ್‌ನಲ್ಲಿ ರಣಜಿ ಪಂದ್ಯ ಆಯೋಜಿಸಲಾಗಿತ್ತು. ಜಾವಗಲ್‌ ಶ್ರೀನಾಥ್‌ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ಈ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ.

ADVERTISEMENT

ಈ ಮೈದಾನವು ಇದುವರೆಗೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಉಸ್ತುವಾರಿಯಲ್ಲಿತ್ತು. ಇದನ್ನು ಸ್ಪೋರ್ಟ್ಸ್‌ ಪೆವಿಲಿಯನ್‌ ಎಂದೂ ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.