ADVERTISEMENT

ಕೈಕೊಟ್ಟ ಭಾರತ ತಂಡದ ಆಟಗಾರರು!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಚೆನ್ನೈ: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲು ಕಂಡು ಮೂರು ದಿನಗಳಾಗಿವೆ. ಆದರೆ ಮುಂದಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ಮನಸ್ಸು ಈ ತಂಡದ ಯಾವುದೇ ಆಟಗಾರರಿಗೆ ಇದ್ದಂತೆ ಕಾಣಿಸುತ್ತಿಲ್ಲ.

ಎರಡು ದಿನಗಳ ಹಿಂದೆಯೇ ತಮಿಳುನಾಡಿನ ರಾಜಧಾನಿಗೆ ಆಗಮಿಸಿರುವ ಭಾರತದ ಆಟಗಾರರು ಹೋಟೆಲ್‌ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಪ್ರಮುಖ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಯುವರಾಜ್ ಸಿಂಗ್ ಬುಧವಾರ ತಂಡ ಸೇರುವ ಸಾಧ್ಯತೆ ಇದೆ. ಕೋಚ್ ಗ್ಯಾರಿ ಕರ್ಸ್ಟನ್ ಮಂಗಳವಾರ ಮಧ್ಯಾಹ್ನ ಆಗಮಿಸಿದರು.

ಎಂ.ಎಸ್.ದೋನಿ ಪಡೆಯ ಕ್ವಾರ್ಟರ್ ಫೈನಲ್ ಸ್ಥಾನ ಇನ್ನೂ ಪೂರ್ಣವಾಗಿ ಖಚಿತಗೊಂಡಿಲ್ಲ. ಈ ತಂಡದವರು ಭಾನುವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಆಡಬೇಕಾಗಿದೆ.

‘ಐಐಟಿ-ಮದ್ರಾಸ್’ ಕ್ಯಾಂಪಸ್‌ನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಭಾರತ ತಂಡದವರು ಅಭ್ಯಾಸ ನಡೆಸಲಿದ್ದಾರೆ ಎಂದು ಐಸಿಸಿ ಹೇಳಿತ್ತು. ಈ ಕಾರಣ ಮಾಧ್ಯಮದವರೆಲ್ಲಾ 15 ಕಿ.ಮೀ.ದೂರದಲ್ಲಿರುವ ಐಐಟಿ ಕ್ಯಾಂಪಸ್‌ಗೆ ತೆರಳಿದ್ದರು. ಆದರೆ ಅರ್ಧ ಗಂಟೆ ಕಾಯ್ದರೂ ಆಟಗಾರರು ಬರಲಿಲ್ಲ.

‘ಭಾರತದ ಆಟಗಾರರು ಅಭ್ಯಾಸ ನಡೆಸಲು ಇವತ್ತು ಬರುವುದಿಲ್ಲ’ ಎಂದು ಕೆಲ ಹೊತ್ತಿನ ಬಳಿಕ ಐಸಿಸಿ ಮಾಧ್ಯಮ ವಕ್ತಾರರೊಬ್ಬರು ತಿಳಿಸಿದರು. ಆದರೆ ಅಭ್ಯಾಸ ರದ್ದು ಪಡಿಸಿದ್ದಕ್ಕೆ ಅವರ ಬಳಿ ಯಾವುದೇ ಕಾರಣವಿರಲಿಲ್ಲ.ಮಂಗಳವಾರ ಸಂಜೆ ಐಸಿಸಿ ತಿಳಿಸಿರುವ ಪ್ರಕಾರ ಐಐಟಿ ಕ್ಯಾಂಪಸ್‌ನಲ್ಲಿ ಬುಧವಾರ 10.30ಕ್ಕೆ ದೋನಿ ಪಡೆ ಅಭ್ಯಾಸ ಶುರು ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.