ದಾವಣಗೆರೆ: ಪ್ರಮುಖ ರೇಟೆಡ್ ಆಟಗಾರರು ನಗರದಲ್ಲಿ ಶುಕ್ರವಾರ ಆರಂಭವಾದ ರಾಜ್ಯ 25 ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ನಿರೀಕ್ಷಿತ ಮುನ್ನಡೆ ಸಾಧಿಸಿದ್ದಾರೆ. ಮೊದಲ ದಿನ ಮೂರನೇ ಸುತ್ತಿನ ಐದನೇ ಬೋರ್ಡ್ನ ಒಂದು `ಡ್ರಾ' ಪಂದ್ಯ ಮಾತ್ರ ಗಮನ ಸೆಳೆಯಿತು.
ಐದನೇ ಬೋರ್ಡ್ನಲ್ಲಿ ಪಲ್ಲವಿ ಭಾರದ್ವಾಜ್ (ರೇಟಿಂಗ್ 1375), ತನಗಿಂತ ಹೆಚ್ಚಿನ ರೇಟಿಂಗ್ ಪಡೆದಿದ್ದ ಆರ್.ಶ್ರೀಧರ್ (1918) ವಿರುದ್ಧ ಅನಿರೀಕ್ಷಿತ ಗೆಲುವಿನ ಸ್ಥಿತಿಯಲ್ಲಿದ್ದಂತೆ ಕಂಡರು. ಬಿಳಿ ಕಾಯಿಗಳಲ್ಲಿ ಆಡಿದ್ದ ಪಲ್ಲವಿ ಕೊನೆಗಳಿಗೆಯಲ್ಲಿ ನಡೆಗಳ ಪುನರಾವರ್ತನೆಯಿಂದ 51ನೇ ನಡೆಯಲ್ಲಿ ಡ್ರಾಕ್ಕೆ ಸಮಾಧಾನಪಡಬೇಕಾಯಿತು. ಇದು ಕೆಲವು ಆಟಗಾರರ ಹುಬ್ಬೇರಿಸುವಂತೆ ಮಾಡಿತು. ಇಬ್ಬರೂ ತಲಾ 2.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ನ್ಯೂ ದಾವಣಗೆರೆ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಅಭಿನವ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನಲ್ಲಿ 23 ರೇಟೆಡ್ ಆಟಗಾರರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 122 ಮಂದಿ ಭಾಗವಹಿಸುತ್ತಿದ್ದಾರೆ.
ಅಗ್ರ ಶ್ರೇಯಾಂಕದ, ಶಿವಮೊಗ್ಗ ಆಟಗಾರ ಶ್ರೀರಾಮ್ ಸರ್ಜಾ (ರೇಟಿಂಗ್: 2190), ಎರಡನೇ ಶ್ರೇಯಾಂಕದ ಎ.ಆಗಸ್ಟಿನ್ (ಕೊಡಗು, 2036), ಕಳೆದ ಬಾರಿಯ ವಿಜೇತ ಎ.ಬಾಲಕಿಶನ್ (ಬೆಂಗಳೂರು, 2029), ಶಿವಮೊಗ್ಗದ ಕಿಶನ್ ಗಂಗೊಳ್ಳಿ (2016), ಶಿವಮೊಗ್ಗದ ಕೇದಾರ್ ಉಮೇಶ್ ವಝೆ, ಬೆಂಗಳೂರಿನ ಜೆ.ಶ್ರೇಯಸ್, ಮಂಗಳೂರಿನ ಆಂಡ್ರಿಯಾ ಡಿಸೋಜ, ಶಾಲನ್ ಜೋನ್ ಪಾಯಸ್ ಸೇರಿದಂತೆ ಪ್ರಮುಖ ಆಟಗಾರರು ಆಡಿದ ಮೂರೂ ಪಂದ್ಯಗಳನ್ನು ಗೆದ್ದು ತಲಾ ಮೂರು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.