ADVERTISEMENT

ಜನರ ಪ್ರೋತ್ಸಾಹವೇ ನಮ್ಮ ಶಕ್ತಿ: ಹೆನ್ರಿ ಅಂಥೋಣಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

l ಕೋಲಂಬಿಯಾ ಎದುರು ಗೋಲು ದಾಖಲಾದ ಬಗ್ಗೆ.

ಆ ಪಂದ್ಯದಲ್ಲಿ ನಾನು 11 ಆಟಗಾರರಲ್ಲಿ ಸ್ಥಾನ ಪಡೆದಿರಲಿಲ್ಲ. ಡಗ್‌ಔಟ್‌ನಲ್ಲಿದ್ದೆ. ಜೀಕ್ಸನ್‌  ಗೋಲು ಹೊಡೆದಾಗ ಕುಣಿದಾಡಿಬಿಟ್ಟಿದ್ದೆ. ಆ ಪಂದ್ಯದಲ್ಲಿ ನಮ್ಮ ತಂಡವೇ ಗೆದ್ದುಬಿಡುತ್ತದೆ ಎಂಬ ವಿಶ್ವಾಸ ಮೂಡಿತ್ತು. ಎಲ್ಲ  ಆಟಗಾರರೂ ಶೇ 100ರಷ್ಟು ಸಮರ್ಪಣೆಯಿಂದ ಆಡಿದ್ದರು.

l ದೆಹಲಿಯ ಕ್ರೀಡಾಂಗಣದಲ್ಲಿ ಆಡಿದ್ದ ಆನುಭವ?

ADVERTISEMENT

ಅಬ್ಬಾ; ಅಷ್ಟೊಂದು ಜನರ ಬೆಂಬಲ ನೋಡಿ ಪುಳಕಿತನಾಗಿದ್ದೆ. ಸಾವಿರಾರು ಜನರು ನಮ್ಮ ಮೂರು ಪಂದ್ಯಗಳಲ್ಲಿಯೂ ಬಹಳಷ್ಟು ಪ್ರೋತ್ಸಾಹ ನೀಡಿದ್ದರು. ನಾವು ಪಂದ್ಯಗಳಲ್ಲಿ ಸೋತರೂ ಜನರ ಪ್ರೀತಿ ಕಡಿಮೆಯಾಗಲಿಲ್ಲ. ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದೆವು. ಅದರ ಅನುಭವ ಬಹಳ ಅಮೂಲ್ಯವಾದದ್ದು.

l ತರಬೇತಿ ಶಿಬಿರದಲ್ಲಿದ್ದಾಗ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇತ್ತೆ?

ವಿಶ್ವಾಸ ಇತ್ತು. ಆದರೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಾಗ ಅಪಾರ ಸಂತೋಷವಾಗಿತ್ತು. ನಮ್ಮ ದೇಶದಲ್ಲಿಯೇ ನಡೆದ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಭಾರತ ತಂಡದ ಕೋಚ್ ಲೂಯಿಸ್ ಅವರ ಮಾರ್ಗದರ್ಶನದಿಂದ ಸಾಕಷ್ಟು ಲಾಭವಾಗಿದೆ.

l ನಿಮ್ಮ ಮುಂದಿನ ಗುರಿ ಏನು?

19 ವರ್ಷದೊಳಗಿನವರ ಎಎಫ್‌ಸಿ ಅರ್ಹತಾ ಟೂರ್ನಿಯಲ್ಲಿ ಆಡಬೇಕು. ಅದರಲ್ಲಿ ನಮ್ಮ ದೇಶ ಅರ್ಹತೆ ಗಳಿಸಬೇಕು. ಚೆನ್ನಾಗಿ ಆಡುವುದು ನಮ್ಮ ಗುರಿ. ಭವಿಷ್ಯದಲ್ಲಿ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿ. ಇವತ್ತು ಬೆಂಗಳೂರಿನಲ್ಲಿ ಸಿಗುತ್ತಿರುವ ಗೌರವದಿಂದ ಅಪಾರ ಸಂತೋಷವಾಗಿದೆ. ನನ್ನ ಕುಟುಂಬದಲ್ಲಿಯೂ ಎಲ್ಲರೂ ಸಂತಸಗೊಂಡಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಚೆನ್ನಾಗಿ ಆಡುವ ವಿಶ್ವಾಸ ಮೂಡಿದೆ.

l ಪುಣೆಯಲ್ಲಿ ಪಡೆಯುತ್ತಿರುವ ತರಬೇತಿ ಕುರಿತು.

ನಾವು ಬೆಂಗಳೂರಿನಲ್ಲಿ ಆಡಿದ್ದು ಕಡಿಮೆ. ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದೇವೆ. ಅಲ್ಲಿಯ ಕೋಚಿಂಗ್‌ನಿಂದ ನಮ್ಮ ಪ್ರತಿಭೆ ಬೆಳಕಿಗೆ ಬರಲು ಸಾಧ್ಯವಾಗಿದೆ. ಆಧುನಿಕ ತಂತ್ರಜ್ಞಾನಗಳ ಮೂಲಕ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.