ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಮತ್ತು ಅಸ್ಸಾಂ ರಾಜ್ಯದ ಶೇಖ್ ಇಫ್ತಿಕಾರ್ ಅವರು ಭುವನೇಶ್ವರದ ಮೆಂಧಾಸಲ್ನಲ್ಲಿ ನಡೆದ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಆಶ್ರಯದ ಪುರುಷರ 50ಕೆ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಶುಕ್ರವಾರ ನಡೆದ ಫೈನಲ್ನಲ್ಲಿ ನಿಕ್ಷೇಪ್ ಮತ್ತು ಶೇಖ್ 6–3, 6–4ರ ನೇರ ಸೆಟ್ಗಳಿಂದ ತಮಿಳುನಾಡಿನ ಭರತ್ ನಿಶೋಕ್ ಕುಮಾರ್ ಮತ್ತು ಸಿದ್ದಾರ್ಥ್ ಆರ್ಯ ಅವರನ್ನು ಸೋಲಿಸಿದರು.
ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ನಿಕ್ಷೇಪ್ ಮತ್ತು ಇಫ್ತಿಕಾರ್, ಮೊದಲ ಸೆಟ್ನಲ್ಲಿ ಸುಲಭವಾಗಿ ಗೆದ್ದು ಮುನ್ನಡೆ ಗಳಿಸಿದರು.
ಎರಡನೇ ಸೆಟ್ನಲ್ಲಿ ಭರತ್ ಮತ್ತು ಸಿದ್ದಾರ್ಥ್ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 4–4ರಲ್ಲಿ ಸಮಬಲವಾಯಿತು. ನಂತರದ ಎರಡು ಗೇಮ್ಗಳಲ್ಲಿ ಪ್ರಾಬಲ್ಯ ಮೆರೆದ ನಿಕ್ಷೇಪ್ ಮತ್ತು ಇಫ್ತಿಕಾರ್ ಜಯಿಸಿದರು.
ಸಿಂಗಲ್ಸ್ನಲ್ಲಿ ನಿರಾಸೆ: ಸಿಂಗಲ್ಸ್ ವಿಭಾಗದಲ್ಲೂ ಕಣಕ್ಕಿಳಿದಿದ್ದ ಬೆಂಗಳೂರಿನ ನಿಕ್ಷೇಪ್, ಸೆಮಿಫೈನಲ್ನಲ್ಲಿ ಸೋತರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಒಡಿಶಾದ ಚಿನ್ಮಯ ಪ್ರಧಾನ್ 3–6, 6–4, 6–3ರಲ್ಲಿ ನಿಕ್ಷೇಪ್ ಸವಾಲು ಮೀರಿದರು.
ಮೊದಲ ಸೆಟ್ನಲ್ಲಿ ಮಿಂಚಿನ ಆಟ ಆಡಿದ ಕರ್ನಾಟಕದ ಆಟಗಾರ 1–0ರ ಮುನ್ನಡೆ ಗಳಿಸಿದ್ದರು. ನಂತರದ ಎರಡೂ ಸೆಟ್ಗಳಲ್ಲಿ ಮೋಡಿ ಮಾಡಿದ ಚಿನ್ಮಯ್ ಖುಷಿಯ ಕಡಲಲ್ಲಿ ತೇಲಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.