ಶಾರ್ಜಾ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫ ರಾಜ್ ಅಹಮ್ಮದ್ ಅವರನ್ನು ಬುಕ್ಕಿ ಒಬ್ಬರು ಸಂಪರ್ಕಿಸಿದ್ದರು ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಖಚಿತಪಡಿಸಿದೆ. ‘ಬುಕ್ಕಿಯೊಬ್ಬರು ತಂಡದ ಆಟಗಾರನನ್ನು ಸಂಪರ್ಕಿಸಿದ್ದು ನಿಜ. ಆ ಆಟಗಾರ ತಕ್ಷಣ ಮಂಡಳಿಗೆ ವಿಷಯ ತಿಳಿಸಿದ್ದು ನಾವು ಅದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಗಮನಕ್ಕೆ ತಂದಿದ್ದೇವೆ’ ಎಂದು ಪಿಸಿಬಿ ಅಧ್ಯಕ್ಷ ನಜಾಮ್ ಸೇಥಿ ಟ್ವಿಟರ್ ಖಾತೆಯಲ್ಲಿ ಬರೆದಿದ್ದಾರೆ.
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಪಾಕಿಸ್ತಾನ ತಂಡದ ನಾಯಕನನ್ನು ಅಕ್ಟೋಬರ್ 17ರಂದು ಬುಕ್ಕಿಯೊಬ್ಬರು ಸಂಪರ್ಕಿಸಿದ್ದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು.
ಆಟಗಾರರು ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದರೆ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂಬ ಅಂಶ ಐಸಿಸಿಯ ಭ್ರಷ್ಟಾಚಾರ ವಿರೋಧಿ ನೀತಿಯಲ್ಲಿದೆ. ಹೀಗೆ ಮಾಡದಿದ್ದರೆ ಅಂಥ ಆಟಗಾರನ ಮೇಲೆ ಆರು ತಿಂಗಳ ನಿಷೇಧ ಹೇರಲಾಗುತ್ತದೆ.
ಪೊಲೀಸರಿಗೆ ದೂರು
ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಸರ್ಫರಾಜ್ ನವಾಜ್ ಅವರು ತಮಗೆ ಬುಕ್ಕಿಗಳಿಂದ ಜೀವ ಬೆದರಿಕೆ ಇದೆ ಪೊಲೀಸರಿಗೆ ದೂರು ನೀಡಿದ್ದು ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.