ಬೆಂಗಳೂರು: `ಟಿ-20 ಮಾದರಿ ಕೇವಲ ಕ್ರಿಕೆಟ್ಗೆ ಮಾತ್ರ ಮೀಸಲಾಗಿತ್ತು. ಈ ಚುಟುಕು ಆಟ ಈಗ ಫುಟ್ಬಾಲ್ಗೂ ಕಾಲಿಟ್ಟಿದ್ದು ಈ ಕ್ರೀಡೆಯ ಇನ್ನಷ್ಟು ಬೆಳವಣಿಗೆಗೆ ಮುನ್ನುಡಿಯಾಗಲಿದೆ~ ಎಂದು ಭಾರತ ತಂಡದ ವಿರಾಟ್ ಕೊಹ್ಲಿ ಹೇಳಿದರು.
ಉದ್ಯಾನನಗರಿಯಲ್ಲಿ ಭಾನುವಾರ ನಡೆದ ಹವ್ಯಾಸಿ ಆಟಗಾರರ ಪೆಪ್ಸಿ ಟಿ-20 ಫುಟ್ಬಾಲ್ ಟೂರ್ನಿಯ ವೇಳೆ ಅವರು ಮಾತನಾಡಿದರು.
`ಐಪಿಎಲ್, ಚಾಂಪಿಯನ್ಸ್ ಲೀಗ್ ಹಾಗೂ ಟಿ-20 ವಿಶ್ವಕಪ್ ಟೂರ್ನಿಗೆ ಮಾತ್ರ ಚುಟುಕು ಆಟ ಮೀಸಲಾಗಿತ್ತು. ಈಗ ಫುಟ್ಬಾಲ್ ಕ್ರೀಡೆಯಲ್ಲಿಯೂ ಈ ಮಾದರಿಯಲ್ಲಿ ಪಂದ್ಯಗಳು ನಡೆಸುತ್ತಿರುವುದು ಈ ಕ್ರೀಡೆಗೆ ಏಳಿಗೆಗೆ ಸಹಕಾರಿಯಾಗಲಿದೆ~ ಎಂದು ಬಲಗೈ ಬ್ಯಾಟ್ಸ್ಮನ್ ಅಭಿಪ್ರಾಯ ಪಟ್ಟರು.
`ಕ್ರಿಕೆಟ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುವಾಗ ನಾವು ಸಾಕಷ್ಟು ಸಲ ಫುಟ್ಬಾಲ್ ಆಡಿದ್ದೇವೆ. ಈ ಕ್ರೀಡೆಯ ಮೂಲಕ ದೈಹಿಕ ಕಸರತ್ತು ನಡೆಸುತ್ತೇವೆ. ಆದರೆ, ಪಂದ್ಯವನ್ನಾಡುವುದು ವಿಭಿನ್ನ ಅನುಭವ ನೀಡುತ್ತದೆ. ಮೊದಲಿನಿಂದಲೂ ಈ ಕ್ರೀಡೆಯ ಬಗ್ಗೆ ಆಸಕ್ತಿ ಇದೆ~ ಎಂದು ಕೊಹ್ಲಿ ಮನದಾಳದ ಮಾತನ್ನು ಬಿಚ್ಚಿಟ್ಟರು.
`ಕ್ರಿಕೆಟ್ ಜೊತೆಗೆ ಎಲ್ಲಾ ಕ್ರೀಡೆಗಳಿಗೂ ಮಹತ್ವ ಸಿಗಬೇಕು. ಈ ಹೊಸ ಮಾದರಿಯ ಆಟದಿಂದ ಫುಟ್ಬಾಲ್ಗೆ ಇನ್ನಷ್ಟು ಖ್ಯಾತಿ ಲಭಿಸಬಹುದು. ಯಾವುದೇ ಕ್ಷೇತ್ರವಿರಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಶ್ರಮ ಅಗತ್ಯ~ ಎಂದು ಕಿವಿಮಾತು ಹೇಳಿದರು.
ಐಪಿಎಲ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಈ ಟೂರ್ನಿಯಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಈ ಸಲ ಉತ್ತಮ ಅವಕಾಶ ಲಭಿಸಿದೆ. ಕ್ರಿಸ್ ಗೇಲ್, ಜಹೀರ್ ಖಾನ್, ಡೇನಿಯಲ್ ವೆಟೋರಿ ಅವರಂತಹ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಸಿಕ್ಕ ಗೆಲುವು ಸಾಕಷ್ಟು ಆತ್ಮವಿಶ್ವಾಸ ಮೂಡಿಸಿದೆ. ಈ ಸಲ ಪ್ರಶಸ್ತಿ ಜಯಿಸುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏನಿದು ಟಿ-20 ಫುಟ್ಬಾಲ್: ಹವ್ಯಾಸಿ ಆಟಗಾರರು ಸೇರಿ ಮಾಡಿಕೊಂಡ ಫುಟ್ಬಾಲ್ ಕ್ರೀಡೆಯ ಮಾದರಿಯಿದು. ಈ ಟೂರ್ನಿಗೆ ಫುಟ್ಬಾಲ್ ಕ್ರೀಡಾಂಗಣ ಚಿಕ್ಕದಾಗಿರುತ್ತದೆ. ಒಂದು ತಂಡದಲ್ಲಿ ಏಳು ಆಟಗಾರರಿದ್ದು, 20 ನಿಮಿಷ ಪಂದ್ಯದ ಕಾಲಾವಧಿ. ನಗರದ ಒಟ್ಟು 32 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಇಲ್ಲಿ ಚಾಂಪಿಯನ್ ಆದ ತಂಡ ಈ ವರ್ಷದ ಜೂನ್ನಲ್ಲಿ ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಟೂರ್ನಿಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಲಿದೆ. ದೆಹಲಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಕ್ಕೆ ಅಂತರರಾಷ್ಟ್ರೀಯ ಫುಟ್ಬಾಲ್ ತಾರೆಯೊಬ್ಬರು ತರಬೇತಿ ನೀಡಲಿದ್ದಾರೆ. ಈ ತಂಡ ಭಾರತ ಕ್ರಿಕೆಟ್ ತಂಡದ ಜೊತೆಗೆ ಫುಟ್ಬಾಲ್ ಪಂದ್ಯವನ್ನು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.