ADVERTISEMENT

ಫುಟ್‌ಬಾಲ್: ಎಚ್‌ಎಎಲ್ ಹೋರಾಟ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಬೆಂಗಳೂರು: ಸ್ಥಳೀಯ ಪ್ರಮುಖ ತಂಡಗಳಲ್ಲಿ ಒಂದಾದ ಹಿಂದೂಸ್ತಾನ್ ಏರೋನಾಟಿಕ್ಸ್ ಕ್ರೀಡಾ ಕ್ಲಬ್ (ಎಚ್‌ಎಎಲ್) ಹಾಗೂ ಫಗವಾರದ ಜೆ.ಸಿ.ಟಿ. ತಂಡಗಳ ನಡುವಣ ರಾಷ್ಟ್ರೀಯ ಐ ಲೀಗ್ ಫುಟ್‌ಬಾಲ್ ಪಂದ್ಯ ಗೋಲಿಲ್ಲದೆ ಡ್ರಾ ಆಯಿತು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ನೀರಸ ಪ್ರದರ್ಶನ ತೋರಿ ರಜೆಯ ಕಾರಣ ಉತ್ತಮ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ನಿರಾಸೆಗೊಳಿಸಿದರು.

ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ ಏರೋನಾಟಿಕ್ಸ್ ತಂಡದವರು ಪೂರ್ವಾರ್ಧದಲ್ಲಿ ಸ್ವಲ್ಪಮಟ್ಟಿಗೆ ಹೋರಾಟದ ಪ್ರದರ್ಶನ ತೋರಿದರಾದರೂ ಪ್ರಯೋಜನಕ್ಕೆ ಬಾರಲಿಲ್ಲ. ತಂಡದ ಪ್ರಮುಖ ಆಟಗಾರರಾದ ಕ್ಸೇವಿಯರ್ ವಿಜಯಕುಮಾರ್ ಹಾಗೂ ಜೆ. ಮುರಳಿ ಎರಡು ಮೂರು ಸುಲಭ ಗೋಲು ಅವಕಾಶಗಳನ್ನು ಹಾಳು ಮಾಡಿಕೊಂಡರು. ಈ ಮಧ್ಯೆ ಇವರಿಬ್ಬರೂ ಒರಾಟಾಟದ ಪ್ರದರ್ಶನ ತೋರಿದ್ದರಿಂದ ರೆಫರಿ ಅಮಜ್ಜದ್ ಖಾನ್ ಅವರು ಹಳದಿ ಕಾರ್ಡ್ ತೋರಿಸಿದರು.

ಜೆ.ಸಿ.ಟಿ ತಂಡದ ಆಟಗಾರರು ದಾಳಿಯ ಯತ್ನಕ್ಕೆ ಪ್ರಯತ್ನಿಸಲಿಲ್ಲ. ಮೈದಾನದ ಮಧ್ಯಭಾಗದಲ್ಲೇ ಚೆಂಡನ್ನು ಅತ್ತಿಂದಿತ್ತ ಒದೆಯುವುದರಲ್ಲೇ ಕಾಲಹರಣ ಮಾಡಿದರು. ಪ್ರಮುಖ ಆಟಗಾರರಾದ ಬಲರಾಜ್ ಸಿಂಗ್, ಶೆಜಿಪಾಲ್ ಸಿಂಗ್ ಹಾಗೂ ಗೌತಮ್ ಅವರಿಂದ ಉತ್ತಮ ಹೋರಾಟ ಕಂಡು ಬರಲಿಲ್ಲ.ಲೀಗ್ ಆರಂಭದಿಂದ ಇಲಿಯವರೆಗೆ ಉತ್ತಮ ಪ್ರದರ್ಶನ ತೋರಿದ ಜೆಸಿಟಿ ತಂಡದ ಆಟಗಾರರು ಇಂದಿನ ಪಂದ್ಯದಲ್ಲಿ ಕಳಪೆ ಆಟದ ಪ್ರದರ್ಶನ ತೋರಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಉಂಟಾಯಿತು.

ಕಂಠೀರವ ಕ್ರೀಡಾಂಗಣದ ಅಂಕಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಉಭಯ ತಂಡದ ಮ್ಯಾನೇಜರ್ ಹಾಗೂ ಮುಖ್ಯ ತರಬೇತಿದಾರರು ದೂರಿದರು. ಇಂದಿನ ಪಂದ್ಯವನ್ನು ಡ್ರಾ ಮಾಡಿಕೊಂಡ ಎಚ್‌ಎಎಲ್ ತಂಡ ಒಟ್ಟು ಹದಿನೈದು ಪಾಯಿಂಟ್ಸ್ ಸಂಗ್ರಹಿಸಿದೆ. ಫೆ. 20 ರಂದುಎಚ್‌ಎಎಲ್ ಮತ್ತು ಕೋಲ್ಕತ್ತ ಎಂ.ಎಂ.ಬಿ. ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.