ADVERTISEMENT

ಬ್ಯಾಡ್ಮಿಂಟನ್: ನಾಲ್ಕನೇ ಸುತ್ತಿಗೆ ಸೂರಜ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಬೆಂಗಳೂರು: ಆತಿಥೇಯ ಕರ್ನಾಟಕದ ಆರ್. ಎನ್. ಸೂರಜ್ ಹಾಗೂ ಎಸ್‌ಡಿಎಸ್ ಕೃಷ್ಣ ಇಲ್ಲಿ ಆರಂಭವಾದ ಐಎಫ್‌ಸಿಐ 76ನೇ ಸೀನಿಯರ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಅರ್ಹತಾ ಹಂತದ ಪಂದ್ಯಗಳಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಸೂರಜ್ 21-16, 21-7ರಲ್ಲಿ ತಮಿಳುನಾಡಿನ ಮೊಹಮ್ಮದ್ ಅಮಿರ್ ಎದುರು ಗೆಲುವು ಸಾಧಿಸಿದರು.

ಮೊದಲ ಗೇಮ್‌ನಲ್ಲಿ ಅಲ್ಪ ಪ್ರತಿರೋಧ ಎದುರಿಸಿದ ರಾಜ್ಯದ ಆಟಗಾರ ಎರಡನೇ ಗೇಮ್‌ನಲ್ಲಿ ಸುಲಭ ಗೆಲುವು ಪಡೆದರು. ಇನ್ನೊಬ್ಬ ಆಟಗಾರ ಕೃಷ್ಣ 21-12, 21-13ರಲ್ಲಿ ಕರ್ನಾಟಕದವರೇ ಆದ ರಿಚರ್ಡ್ ಡಿಸೋಜಾ ಎದುರು ಜಯಿಸಿದರು.

ಅರ್ಹತಾ ಹಂತದ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಇರ್ಷಾದ್ ಖಾನ್ 21-12, 21-14ರಲ್ಲಿ ಎಂ.ಜಿ. ಹೇಮಂತ್ ಮೇಲೂ, ಬಿ.ಎಸ್. ಫಲ್ಗುಣ 21-13, 21-12ರಲ್ಲಿ ಕೆ. ಕಾರ್ತಿಕೇಯ ವಿರುದ್ಧವೂ, ಸೌರವ್ ಕಪೂರ್ 21-13, 21-11ರಲ್ಲಿ ಎಸ್.ಡೇನಿಯಲ್ ಫರೀದ್ ಮೇಲೂ, ಮಹಾರಾಷ್ಟ್ರದ ಅಕ್ಷತ್ ಪಾಟೀಲ್ 22-20, 21-16ರಲ್ಲಿ ಕರ್ನಾಟಕದ ಎಂ. ಕಾರ್ತಿಕ್ ವಿರುದ್ಧವೂ, ಪ್ರಶಾಂತ್ ಬಾತ್ರೆ 21-17, 21-14ರಲ್ಲಿ ಹರ್ಷಿತ್ ಅಗರ್‌ವಾಲ್ ಮೇಲೂ, ದೆಹಲಿಯ ಅಮಿತ್ ಶರ್ಮ 21-12, 21-11ರಲ್ಲಿ ನಿಶಾಂತ್ ಮೂರ್ತಿ ವಿರುದ್ಧವೂ ವಿಜಯ ಸಾಧಿಸಿದರು.

ಮಹಿಳಾ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಉತ್ತರಾ ಪ್ರಕಾಶ್ 21-16, 21-13ರಲ್ಲಿ ಆಂಧ್ರ ಪ್ರದೇಶದ ಜಿ. ಲಕ್ಷ್ಮೀ ಮೇಲೂ, ಮಹಿಮಾ ಅಗರ್‌ವಾಲ್ 21-11, 21-15ರಲ್ಲಿ ಪಿ. ರಶ್ಮಿ ವಿರುದ್ಧವೂ, ಜಾಕ್ವೆಲಿನ್ ರೋಸ್ ಕುನ್ನತ್ 21-10, 21-3ರಲ್ಲಿ ಅಶ್ವತಿ ಮೇಲೂ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಕರ್ನಾಟಕ ತಂಡ ಪ್ರಕಟ: ಗುರುವಾರ (ಜನವರಿ 19) ಆರಂಭವಾಗಲಿರುವ 67ನೇ ಅಂತರ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಗೆ ಏಳು ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡವನ್ನು ಮಂಗಳವಾರ ಕೆಬಿಎ ಪ್ರಕಟಿಸಿತು.
ತಂಡ ಇಂತಿದೆ: ಅನೂಪ್ ಶ್ರೀಧರ್, ಆದರ್ಶ ಕುಮಾರ್, ವೆಂಕಟೇಶ್ ಪ್ರಸಾದ್, ಡಿ. ಗುರುಪ್ರಸಾದ್, ರೋಹನ್ ಕ್ಯಾಸ್ಟಲಿನೊ, ಆರ್. ಆದಿತ್ಯ ಪ್ರಕಾಶ್ ಮತ್ತು ಅಭಿಷೇಕ್ ಎಲಿಯಾರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.