ADVERTISEMENT

ಯುವ ಶೂಟರ್‌ಗಳಿಗೆ ಹಿನ್ನಡೆಯಾಗಲಿದೆ

ಭಾರತದ ಅನುಭವಿ ಶೂಟರ್‌ ಜಿತು ರಾಯ್ ಅನಿಸಿಕೆ

ಪಿಟಿಐ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಯುವ ಶೂಟರ್‌ಗಳಿಗೆ ಹಿನ್ನಡೆಯಾಗಲಿದೆ
ಯುವ ಶೂಟರ್‌ಗಳಿಗೆ ಹಿನ್ನಡೆಯಾಗಲಿದೆ   

ನವದೆಹಲಿ: ‘ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್‌ ಸ್ಪರ್ಧೆಯನ್ನು ತೆಗೆದು ಹಾಕಲು ಯೋಜಿಸಿರುವುದು ಸರಿಯಲ್ಲ. ಈ ನಿರ್ಧಾರದಿಂದ ಯುವ ಶೂಟರ್‌ಗಳಿಗೆ ಹಿನ್ನಡೆ ಉಂಟಾಗಲಿದೆ’ ಎಂದು ಭಾರತದ ಅನುಭವಿ ಶೂಟರ್‌ ಜಿತು ರಾಯ್‌ ಹೇಳಿದ್ದಾರೆ.

‘ಈ ಬಾರಿಯ ಕಾಮನ್‌ವೆಲ್ತ್‌ನ ಶೂಟಿಂಗ್‌ ವಿಭಾಗದಲ್ಲಿ ನಾವು ಹೆಚ್ಚು ಪದಕಗಳನ್ನು ಜಯಿಸಿದ್ದೇವೆ.  ಯುವ ಶೂಟರ್‌ಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರು 2020ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕೂಟದಲ್ಲೂ ಪದಕ ಗೆಲ್ಲುವ ಭರವಸೆ ಹೊಂದಿದ್ದಾರೆ. ಶೂಟಿಂಗ್‌ ಸ್ಪರ್ಧೆಯನ್ನು ತೆಗೆದು ಹಾಕಿದರೆ  ಅವರ ಕನಸು ಭಗ್ನವಾಗಲಿದೆ’ ಎಂದಿದ್ದಾರೆ.

ಶೂಟಿಂಗ್‌ ಸ್ಪರ್ಧೆಯನ್ನು ತೆಗೆದು ಹಾಕಿದರೆ ಭಾರತವು, ಕೂಟದಿಂದಲೇ ಹಿಂದೆ ಸರಿಯಲಿದೆ ಎಂದು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್‌ ಸಿಂಗ್‌ ಮಂಗಳವಾರ ಹೇಳಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಜಿತು ‘ರಣಿಂದರ್‌ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಅವರ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಶೂಟಿಂಗ್‌ನಲ್ಲಿ ನಾವು ಮೊದಲಿನಿಂದಲೂ ಹೆಚ್ಚು ಪದಕಗಳನ್ನು ಗೆಲ್ಲುತ್ತಿದ್ದೇವೆ. ಈಗ ಈ ಕ್ರೀಡೆಯನ್ನು ಕೈಬಿಟ್ಟರೆ ಖಂಡಿತವಾಗಿಯೂ ನಿರಾಸೆಯಾಗಲಿದೆ’ ಎಂದು ನುಡಿದಿದ್ದಾರೆ.

‘ಕಾಮನ್‌ವೆಲ್ತ್‌ ಆರಂಭಕ್ಕೂ ಮುನ್ನ ಕಠಿಣ ಅಭ್ಯಾಸ ನಡೆಸಿದ್ದೆ. ಹೀಗಾಗಿ 10 ಮೀಟರ್ಸ್‌ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಯಿತು. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಜೊತೆಗೆ ಮುಂಬರುವ ಕೂಟಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.