ADVERTISEMENT

ರೆಂಜಿತ್‌ಗೆ `ಅರ್ಜುನ': ಹೊರಬೀಳದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕೇರಳದ ಅಥ್ಲೀಟ್ ರೆಂಜಿತ್ ಮಹೇಶ್ವರಿಗೆ ಅರ್ಜುನ ಪ್ರಶಸ್ತಿ ನೀಡಬೇಕೇ ಎಂಬುದರ ಬಗ್ಗೆ ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲು ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ.

ಟ್ರಿಪಲ್ ಜಂಪ್ ಸ್ಪರ್ಧಿ ರೆಂಜಿತ್ ಇತರರ ಜೊತೆ ಶನಿವಾರ ಅರ್ಜುನ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇವರ ಪ್ರಶಸ್ತಿಯನ್ನು ತಡೆಹಿಡಿಯಲಾಗಿತ್ತು. ಉದ್ದೀಪನಾ ಮದ್ದು ಸೇವನೆಯ ಹಳೆಯ `ಭೂತ' ಕಾಡಿದ್ದು ಇದಕ್ಕೆ ಕಾರಣ.

2008 ರಲ್ಲಿ ರೆಂಜಿತ್ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದು ಮೂರು ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು ಎಂದು ವರದಿಯಾಗಿತ್ತು. ಇದರ ಸತ್ಯಾಸತ್ಯತೆ ತಿಳಿದ ಬಳಿಕವೇ ಪ್ರಶಸ್ತಿ ನೀಡಲು ಕ್ರೀಡಾ ಇಲಾಖೆ ನಿರ್ಧರಿಸಿತ್ತು. ಮಾತ್ರವಲ್ಲ, ಸೋಮವಾರದವರೆಗೆ ಕಾಯುವಂತೆ ರೆಂಜಿತ್‌ಗೆ ಸೂಚಿಸಿತ್ತು.

ರೆಂಜಿತ್ ನಿಷೇಧ ಶಿಕ್ಷೆಗೆ ಒಳಗಾಗಿದ್ದರೇ ಎಂಬುದರ ಬಗ್ಗೆ ವರದಿ ನೀಡುವಂತೆ ಕ್ರೀಡಾ ಇಲಾಖೆ ಭಾರತ ಅಥ್ಲೆಟಿಕ್ ಫೆಡರೇಷನ್‌ಗೆ (ಎಎಫ್‌ಐ) ತಿಳಿಸಿದೆ. ಆದರೆ ಎಎಫ್‌ಐ ಇದುವರೆಗೂ ವರದಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.