ಬೆಂಗಳೂರು: ವೆಸ್ಟ್ ಇಂಡೀಸ್ ‘ಎ’ ತಂಡದ ಎದುರಿನ ಕ್ರಿಕೆಟ್ ಸರಣಿ ಆರಂಭವಾಗುವ ಮುನ್ನವೇ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಈ ಗಾಯದ ಸಮಸ್ಯೆಯೇ ‘ದಾವಣಗೆರೆ ಎಕ್ಸ್ಪ್ರೆಸ್’ ವಿನಯ್ ಕುಮಾರ್ ವರದಾನವಾಗಿದೆ!
ವೇಗಿ ಪ್ರವೀಣ್ ಕುಮಾರ್ ಮತ್ತು ಆಲ್ರೌಂಡರ್ ಇರ್ಫಾನ್ ಪಠಾಣ್ ಗಾಯಕ್ಕೆ ತುತ್ತಾಗಿದ್ದು, ಕರ್ನಾಟಕದ ವಿನಯ್ ಕುಮಾರ್ ಮತ್ತು ಪಂಜಾಬ್ನ ಸಿದ್ಧಾರ್ಥ್ ಕೌಲ್ ಅವರಿಗೆ ಏಕದಿನ ಮತ್ತು ಟ್ವೆಂಟಿ–20 ತಂಡದಲ್ಲಿ ಸ್ಥಾನ ನೀಡಲಾಗಿದೆ.
ಜುಲೈ ತಿಂಗಳಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ವಿನಯ್ ಇದ್ದರು. ಅಲ್ಲಿ ಮೂರು ಪಂದ್ಯಗಳಿಂದ ಎರಡು ವಿಕೆಟ್ ಪಡೆದಿದ್ದರು.
ಹೋದ ವರ್ಷ ಶ್ರೀಲಂಕಾ ಎದುರು ನಡೆದ ಏಕದಿನ ಕ್ರಿಕೆಟ್ ಸರಣಿಯ ವೇಳೆ ಬರೋಡದ ಇರ್ಫಾನ್ ಗಾಯಗೊಂಡಿದ್ದರು. ಆಗಿನಿಂದಲೂ ಅವರು ನಿರಂತರ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಮಂಡಿ ನೋವಿನ ನಡುವೆಯೂ ರಣಜಿ ಪಂದ್ಯಗಳನ್ನು ಆಡಿದ್ದರು.
ಉತ್ತರ ಪ್ರದೇಶದ ವೇಗಿ ಪ್ರವೀಣ್ ಕುಮಾರ್ಗೂ ಗಾಯದ ಸಮಸ್ಯೆ ಕಾಡುತ್ತಿದೆ. ಇದೇ ವರ್ಷದ ಫೆಬ್ರುವರಿಯಲ್ಲಿ ನಡೆದ ಕಾರ್ಪೊರೇಟ್ ಟ್ರೋಫಿ ಪಂದ್ಯದ ವೇಳೆ ಅನುಚಿತ ವರ್ತನೆ ತೋರಿದ ಕಾರಣ ಪ್ರವೀಣ್ ಟೀಕೆಗೆ ಗುರಿಯಾಗಿದ್ದರು. ಹೋದ ವರ್ಷದ ಪಾಕಿಸ್ತಾನ ಎದುರಿನ ಏಕದಿನ ಸರಣಿಯಲ್ಲಿ ಆಡಿದ್ದು ಇವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಎನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.