ADVERTISEMENT

ಸಂತಸ ನೀಡಿದ ಗೆಲುವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಕೋಲ್ಕತ್ತ (ಪಿಟಿಐ): ಭಾರತದ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಜಯ ಗಳಿಸಿರುವುದು ಸಂತಸದ ಸಂಗತಿ ಎಂದು ಇಂಗ್ಲೆಂಡ್ ತಂಡದ ನಾಯಕ ಗ್ರೇಮ್ ಸ್ವಾನ್ ಹೇಳಿದ್ದಾರೆ.

`ಐದೂ ಏಕದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ ಪರಾಭವಗೊಂಡಿದ್ದ ನಮ್ಮ ತಂಡಕ್ಕೆ ಈ ಜಯ ಸಂತಸ ನೀಡಿದೆ. ತವರು ನಾಡಿಗೆ ನಾವು ಬರಿಗೈಲಿ ವಾಪಾಸಾಗುತ್ತಿಲ್ಲ ಎಂಬ ಸಮಾಧಾವಿದೆ~ ಎಂದು ಶನಿವಾರದ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ನುಡಿದರು.

`ಈ ಪಂದ್ಯದಿಂದ ನಮ್ಮ ತಂಡದಲ್ಲಿರುವ ಯುವ ಆಟಗಾರರು ಸಾಕಷ್ಟು ಕಲಿತಿದ್ದಾರೆ. ಅಲ್ಲದೆ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಮುನ್ನ ಆಟಗಾರರಿಗೆ ಅಗತ್ಯವಿದ್ದ ಆತ್ಮವಿಶ್ವಾಸ ದೊರೆತಿದೆ~ ಎಂದರು.  ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್‌ಗಳ ಜಯ ಸಾಧಿಸಿತ್ತು.
ಪೀಟರ್‌ಸನ್‌ಗೆ ಎಚ್ಚರಿಕೆ: ಭಾರತ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕೆ ಇಂಗ್ಲೆಂಡ್‌ನ ಕೆವಿನ್ ಪೀಟರ್‌ಸನ್‌ಗೆ ಎಚ್ಚರಿಕೆ ನೀಡಲಾಗಿದೆ. ಕ್ರೀಡಾಂಗಣದಲ್ಲಿ ಶನಿವಾರ ಅಂಪೈರ್ ನೀಡಿದ ತೀರ್ಪಿಗೆ ಕೆವಿನ್ ಅತೃಪ್ತಿ ವ್ಯಕ್ತಪಡಿಸಿದ್ದರು.

ಸುರೇಶ್ ರೈನಾ ಎಸೆತದಲ್ಲಿ ಪೀಟರ್‌ಸನ್ ಎಲ್‌ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದರು. ಆದರೆ ಅಂಪೈರ್ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿ ಪೀಟರ್‌ಸನ್ ಪೆವಿಲಿಯನ್‌ಗೆ ಮರಳಿದ್ದರು. ಮೈದಾನದ ಅಂಪೈರ್‌ಗಳಾದ ಸುಧೀರ್ ಅಸ್ನಾನಿ ಮತ್ತು ಎಸ್. ರವಿ, ಮೂರನೇ ಅಂಪೈರ್ ವಿನೀತ್ ಕುಲಕರ್ಣಿ ಮತ್ತು ನಾಲ್ಕನೇ ಅಂಪೈರ್ ಕೆ. ಶ್ರೀನಾಥ್ ಇಂಗ್ಲೆಂಡ್ ಬ್ಯಾಟ್ಸ್‌ಮನ್ ವಿರುದ್ಧ ರೆಫರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.