ADVERTISEMENT

ಸೆಹ್ವಾಗ್‌, ಗಂಭೀರ್‌ಗೆ ಅವಕಾಶ

ಕ್ರಿಕೆಟ್‌: ವೆಸ್ಟ್‌ ಇಂಡೀಸ್‌ ‘ಎ’ ಎದುರಿನ ಪಂದ್ಯಗಳಿಗೆ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST
ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನವನ್ನು ಗಂಭೀರ್‌ (ಎಡಬದಿ) ಹಾಗೂ ಸೆಹ್ವಾಗ್‌ ಮಾಡಲಿದ್ದಾರೆ
ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನವನ್ನು ಗಂಭೀರ್‌ (ಎಡಬದಿ) ಹಾಗೂ ಸೆಹ್ವಾಗ್‌ ಮಾಡಲಿದ್ದಾರೆ   

ವಿಶಾಖ ಪಟ್ಟಣ (ಪಿಟಿಐ): ಹಿರಿಯ ಆಟಗಾರರಾದ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಯುವರಾಜ್‌ ಸಿಂಗ್ ಮತ್ತು ವೇಗಿ ಜಹೀರ್‌ ಖಾನ್‌ ಅವರ ಕಾಯುವಿಕೆಗೆ ತೆರೆ ಬಿದ್ದಿದೆ. ವೆಸ್ಟ್‌ ಇಂಡೀಸ್‌ ‘ಎ’ ತಂಡದ ಎದುರು ನಡೆಯಲಿರುವ ಕ್ರಿಕೆಟ್‌ ಪಂದ್ಯಗಳಿಗೆ ಈ ಈ ಆಟಗಾರರು ಸ್ಥಾನ ಗಳಿಸಿದ್ದಾರೆ.

ಸೆಪ್ಟೆಂಬರ್‌ 15ರಿಂದ ವೆಸ್ಟ್ ಇಂಡೀಸ್‌ ‘ಎ’ ಎದುರು ಪಂದ್ಯಗಳು ಶುರುವಾಗಲಿವೆ. ಏಕದಿನ ಮತ್ತು ಟ್ವೆಂಟಿ–20 ಪಂದ್ಯಕ್ಕೆ ಯುವರಾಜ್‌ ಸಿಂಗ್‌ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮಂಗಳವಾರ ಈ ತಂಡಗಳನ್ನು ಆಯ್ಕೆ ಮಾಡಿತು.

ಕಳಪೆ ಪ್ರದರ್ಶನದ ಕಾರಣ ರಾಷ್ಟ್ರೀಯ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಸೆಹ್ವಾಗ್‌, ಗಂಭೀರ್‌ ಮತ್ತು ಜಹೀರ್‌ ಅವರು ನಾಲ್ಕು ದಿನಗಳ ಎರಡು ಮತ್ತು ಮೂರನೇ ಪಂದ್ಯಕ್ಕೆ ಸ್ಥಾನ ಗಳಿಸಿದ್ದಾರೆ. ಆದರೆ, ಮೊದಲ ಪಂದ್ಯಕ್ಕೆ ಸ್ಥಾನ ಸಿಕ್ಕಿಲ್ಲ. ಈ ಪಂದ್ಯ ಸೆಪ್ಟೆಂಬರ್‌ 25ರಿಂದ 28ರಿಂದ ಮೈಸೂರಿನಲ್ಲಿ ನಡೆಯಲಿದೆ.

ಯುವರಾಜ್‌ ಹೋದ ವರ್ಷ ಇಂಗ್ಲೆಂಡ್‌ ಎದುರು ಆಡಿದ್ದು ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಮತ್ತೆ ಈಗ ಅವರು                ಸ್ಥಾನ ಗಳಿಸಿದ್ದಾರೆ. ಮೂರು ಏಕದಿನ ಪಂದ್ಯಗಳು ಸೆ. 15, 17 ಹಾಗೂ 19ರಂದು ಮತ್ತು ಏಕೈಕ ಟ್ವೆಂಟಿ–20 ಪಂದ್ಯ ಸೆ. 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಎನ್‌ಕೆಪಿ ಸಾಳ್ವೆ ಚಾಲೆಂಜರ್‌ ಏಕದಿನ ಕ್ರಿಕೆಟ್‌ ಸರಣಿಗೂ ಇದೇ ವೇಳೆ ಇಂಡಿಯಾ ರೆಡ್‌ ಮತ್ತು ಇಂಡಿಯಾ  ಬ್ಲೂ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಟೂರ್ನಿ ಸೆಪ್ಟೆಂಬರ್‌ 26–29ರ ವರೆಗೆ ಇಂದೋರ್‌ನಲ್ಲಿ ನಡೆಯಲಿದೆ. ವಿಜಯ್‌ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿರುವ ದೆಹಲಿ ತಂಡವೂ ಎನ್‌ಕೆಪಿ ಸಾಳ್ವೆಯಲ್ಲಿ ಆಡಲಿದೆ. ಇಂಡಿಯಾ ಬ್ಲೂ ತಂಡವನ್ನು ಯುವರಾಜ್‌ ಸಿಂಗ್‌ ಮತ್ತು ರೆಡ್‌ ತಂಡವನ್ನು ಇರ್ಫಾನ್‌ ಪಠಾಣ್‌ ಮುನ್ನಡೆಸಲಿದ್ದಾರೆ.

ಉತ್ತರ ಪ್ರದೇಶದ ಮಹಮ್ಮದ್‌ ಕೈಫ್‌ ಏಳು ವರ್ಷಗಳ ಹಿಂದೆ ಭಾರತ ತಂಡದಲ್ಲಿ ಆಡಿದ್ದರು. ನಂತರ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಆಟವಾಡಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. 2006ರ ನವೆಂಬರ್‌ನಲ್ಲಿ ಪೋರ್ಟ್‌ ಎಲಿಜಬಿತ್‌ನಲ್ಲಿ  ನಡೆದ ದಕ್ಷಿಣ ಆಫ್ರಿಕಾ ಎದುರು ಆಡಿದ್ದು ಕೈಫ್‌ಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಇವರು ವಿಂಡೀಸ್‌ ‘ಎ’ ಎದುರಿನ ನಾಲ್ಕು ದಿನಗಳ ಎರಡು ಮತ್ತು ಮೂರನೇ ಪಂದ್ಯಗಳಿಗೆ ಸ್ಥಾನ ಗಳಿಸಿದ್ದಾರೆ.

ನಾಲ್ಕು ದಿನಗಳ ಎರಡು ಮತ್ತು ಮೂರನೇ ಪಂದ್ಯಕ್ಕೆ ಭಾರತ ‘ಎ’ ತಂಡ:
ಚೇತೇಶ್ವರ ಪೂಜಾರ (ನಾಯಕ), ಗೌತಮ್‌ ಗಂಭೀರ್‌, ವೀರೇಂದ್ರ ಸೆಹ್ವಾಗ್‌, ಶೆಲ್ಡನ್‌ ಜಾಕ್ಸನ್‌, ಅಭಿಷೇಕ್‌ ನಾಯರ್‌, ಪರಸ್‌ ಡೊಗ್ರಾ, ಉದಯ್‌ ಕೌಲ್‌ (ವಿಕೆಟ್‌ ಕೀಪರ್‌), ಪರ್ವೇಜ್‌ ರಸೂಲ್‌, ಭಾರ್ಗವ್‌ ಭಟ್‌, ಧವಳ್‌ ಕುಲಕರ್ಣಿ, ಜಹೀರ್‌ ಖಾನ್‌, ಈಶ್ವರ್ ಚಾಂದ್‌ ಪಾಂಡೆ, ಮಹಮ್ಮದ್ ಶಮಿ ಮತ್ತು ಮಹಮ್ಮದ್ ಕೈಫ್‌.

ಮೂರು ಏಕದಿನ ಮತ್ತು ಒಂದು ಟ್ವೆಂಟಿ–20 ಪಂದ್ಯಕ್ಕೆ ಭಾರತ ‘ಎ’ ತಂಡ: ಯುವರಾಜ್‌ ಸಿಂಗ್‌ (ನಾಯಕ), ಉನ್ಮುಕ್ತ್‌ ಚಾಂದ್‌, ರಾಬಿನ್‌ ಉತ್ತಪ್ಪ, ಬಾಬಾ ಅಪರಾಜಿತ್‌, ಕೇದಾರ್‌ ಜಾಧವ್‌, ನಮನ್‌ ಓಜಾ (ವಿಕೆಟ್‌ ಕೀಪರ್‌), ಯೂಸುಫ್‌ ಪಠಾಣ್‌, ಇರ್ಫಾನ್‌ ಪಠಾಣ್‌, ಜಯದೇವ್  ಉನದ್ಕತ್‌, ಪ್ರವೀಣ್‌ ಕುಮಾರ್‌, ಸುಮಿತ್‌ ನಾರ್ವಲ್‌, ಶಹಬಜ್‌ ನದೀಮ್‌, ಮನ್‌ದೀಪ್‌ ಸಿಂಗ್‌ ಮತ್ತು ರಾಹುಲ್‌ ಶರ್ಮಾ.

ನಾಲ್ಕು ದಿನಗಳ ಮೊದಲ ಪಂದ್ಯಕ್ಕೆ ಭಾರತ ‘ಎ’ ತಂಡ:  ಚೇತೇಶ್ವರ ಪೂಜಾರ (ನಾಯಕ), ಜೀವನ್‌ಜ್ಯೋತ್‌ ಸಿಂಗ್‌, ಕೆ.ಎಲ್‌. ರಾಹುಲ್‌, ಮನ್‌ಪ್ರೀತ್‌ ಜುನೇಜಾ, ರಜತ್‌ ಪಲಿವಾಲ್‌, ಹರ್ಷದ್‌ ಕಾಡೇವಾಲೆ, ಪರ್ವೇಜ್‌ ರಸೂಲ್‌, ಭಾರ್ಗವ್‌ ಭಟ್‌, ಈಶ್ವರ್‌ ಚಂದ್‌ ಪಾಂಡೆ, ಮಹಮ್ಮದ್‌ ಶಮಿ, ಅಶೋಕ್ ದಿಂಡಾ, ರೋಹಿತ್‌ ಮೋತ್ವಾನಿ, ಧವಳ್‌ ಕುಲಕರ್ಣಿ (ವಿಕೆಟ್‌ ಕೀಪರ್‌) ಮತ್ತು ಪರಸ್‌ ಡೊಗ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.