ADVERTISEMENT

ಕ್ರಿಕೆಟ್‌: ಕೇರಳಕ್ಕೆ ಗೌತಮ್‌; ಗೋವಾಕ್ಕೆ ಸ್ಟುವರ್ಟ್‌?

ಕರ್ನಾಟಕ ಕ್ರಿಕೆಟ್‌ ತಂಡ ತೊರೆದ ಪ್ರತಿಭಾನ್ವಿತ ಆಟಗಾರರು

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 17:52 IST
Last Updated 18 ಜುಲೈ 2019, 17:52 IST
ಸ್ಟುವರ್ಟ್‌ ಬಿನ್ನಿ
ಸ್ಟುವರ್ಟ್‌ ಬಿನ್ನಿ   

ಹುಬ್ಬಳ್ಳಿ: ರಾಜ್ಯ ಕ್ರಿಕೆಟ್ ತಂಡದ ಹಲ ವಾರು ಅವಿಸ್ಮರಣೀಯ ಗೆಲುವುಗಳಿಗೆ ಮಹತ್ವದ ಕಾಣಿಕೆ ನೀಡಿದ್ದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಿ.ಎಂ. ಗೌತಮ್‌ ಹಾಗೂ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ರಾಜ್ಯ ತಂಡವನ್ನು ತೊರೆದಿದ್ದಾರೆ.

ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಈ ಇಬ್ಬರೂ ಆಟಗಾರರಿಗೆ ಬುಧವಾರ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ. ಗೌತಮ್‌ ಕೇರಳಕ್ಕೆ, ಸ್ಟುವರ್ಟ್‌ ಗೋವಾ ತಂಡಕ್ಕೆ ಹೋಗುವ ಸಾಧ್ಯತೆಯಿದೆ ಎನ್ನ ಲಾಗಿದೆ.

ಬಲಗೈ ಬ್ಯಾಟ್ಸ್‌ಮನ್‌ ಗೌತಮ್‌ 2017ರಲ್ಲಿ ಕೋಲ್ಕತ್ತದಲ್ಲಿ ವಿದರ್ಭ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 94 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 4,716 ರನ್‌ ಕಲೆಹಾಕಿದ್ದಾರೆ. 10 ಶತಕ ಹಾಗೂ 24 ಅರ್ಧಶತಕಗಳನ್ನು ಹೊಡೆದಿದ್ದಾರೆ. 51 ಲಿಸ್ಟ್ ‘ಎ’ ಮತ್ತು 48 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದರು.

ADVERTISEMENT

2013–14ರ ದೇಶಿ ಋತುವಿನಲ್ಲಿ ಕರ್ನಾಟಕ ತಂಡ ರಣಜಿ ಚಾಂಪಿಯನ್‌ ಆಗಿತ್ತು. ಈ ಸಾಧನೆಯಲ್ಲಿ ಗೌತಮ್‌ ಪ್ರಮುಖ ಪಾತ್ರ ವಹಿಸಿದ್ದರು.

‘ಗೌತಮ್‌ಗೆ ಕೇರಳ, ಗೋವಾ ಸೇರಿದಂತೆ ಹಲವು ರಾಜ್ಯಗಳಿಂದ ಆಹ್ವಾನವಿದೆ. ಯಾವ ತಂಡಕ್ಕೆ ಹೋಗ ಬೇಕು ಎಂಬುದನ್ನು ನಿರ್ಧರಿಸಿಲ್ಲ’ ಎಂದು ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹೋದ ವರ್ಷ ಬೆಳಗಾವಿಯಲ್ಲಿ ನಡೆದ ಮುಂಬೈ ವಿರುದ್ಧದ ರಣಜಿ ಪಂದ್ಯ ಬಿನ್ನಿ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯ. ಒಟ್ಟು 88 ಪಂದ್ಯಗಳಿಂದ 4,332 ರನ್‌ ಕಲೆ ಹಾಕಿದ್ದಾರೆ. 10 ಶತಕ, 19 ಅರ್ಧಶತಕ ಕಲೆಹಾಕಿದ್ದಾರೆ.

ಕೆಪಿಎಲ್‌ನಲ್ಲಿ ಅವಕಾಶ: ಗೌತಮ್‌ ಹಾಗೂ ಬಿನ್ನಿ ಕೆಎಸ್‌ಸಿಎ ನೋಂದಾಯಿತ ಆಟಗಾರರಾಗಿರುವ ಕಾರಣ ಕೆಪಿಎಲ್‌ ಟೂರ್ನಿಯಲ್ಲಿ ಆಡಲು ಯಾವುದೇ ಸಮಸ್ಯೆಯಿಲ್ಲ ಎಂದು ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.