ADVERTISEMENT

‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’

ಮಹಿಳಾ ಟ್ವೆಂಟಿ–20 ಕ್ರಿಕೆಟ್: ಭಾರತಕ್ಕೆ 2 ರನ್‌ಗಳ ಸೋಲು

ಪಿಟಿಐ
Published 10 ಫೆಬ್ರುವರಿ 2019, 20:30 IST
Last Updated 10 ಫೆಬ್ರುವರಿ 2019, 20:30 IST
ಸ್ಮೃತಿ ಮಂದಾನ
ಸ್ಮೃತಿ ಮಂದಾನ   

ಹ್ಯಾಮಿಲ್ಟನ್: ಸ್ಮೃತಿ ಮಂದಾನ ಅವರ ಅಬ್ಬರದ ಬ್ಯಾಟಿಂಗ್‌ ಬಲವಿದ್ದರೂ ಭಾರತ ಮಹಿಳಾ ಕ್ರಿಕೆಟ್ ತಂಡವು ಭಾನುವಾರ ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸೋತಿತು.

162 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿದ್ದರೆ ಜಯದ ಸಂಭ್ರಮ ಆಚರಿಸಬಹುದಿತ್ತು. ಆದರೆ, ಕೇವಲ ಎರಡು ರನ್‌ ಗಳಿಸಿತು. ಇದರೊಂದಿಗೆ ಆತಿಥೇಯ ತಂಡವು 3–0ಯಿಂದ ಸರಣಿಯನ್ನು ಗೆದ್ದಿತು.ಭಾರತ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 ರನ್‌ ಗಳಿಸಿತು.

ಸ್ಮೃತಿ ಮಂದಾನ 52 ಎಸೆತಗಳಲ್ಲಿ 86 ರನ್‌ ಗಳಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್ ಆಗಿ ದಾಖಲಾಯಿತು.

ADVERTISEMENT

ಈ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ (ಔಟಾಗದೆ 24; 20ಎಸೆತ) ಚೆನ್ನಾಗಿ ಆಡಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಮಿಥಾಲಿ ಮತ್ತು ದೀಪ್ತಿ ಶರ್ಮಾ (ಔಟಾಗದೆ 21) ಕ್ರೀಸ್‌ನಲ್ಲಿದ್ದರು. ಇಬ್ಬರೂ ಸೇರಿ ಈ ಓವರ್‌ನಲ್ಲಿ 14 ರನ್‌ ಗಳಿಸಿದರು.

ಆದರೆ ಸರಣಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. ಸರಣಿಯ ಮೊದಲ ಪಂದ್ಯದಲ್ಲಿ ಅವರು 17, ಎರಡನೇ ಪಂದ್ಯದಲ್ಲಿ ಐದು ಮತ್ತು ಮೂರನೇಯದ್ದರಲ್ಲಿ ಎರಡು ರನ್‌ ಗಳಿಸಿದರು.

‘ಸರಣಿ ಸೋಲಿನಿಂದ ಬಹಳ ಬೇಸರವಾಗಿದೆ. ನಾವು ಇನ್ನೂ ಚೆನ್ನಾಗಿ ಆಡಬಹುದಿತ್ತು. ಮುಂದಿನ ಸರಣಿಗಳಿಗೆ ಉತ್ತಮವಾಗಿ ಸಿದ್ಧಗೊಳ್ಳಬೇಕಾದ ಅವಶ್ಯಕತೆ ಇದೆ’ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

‘ಸರಣಿಯಲ್ಲಿ ಸ್ಮೃತಿಮಂದಾನ ಮತ್ತು ಜೆಮಿಮಾ ರಾಡ್ರಿಗಸ್ ಅವರು ಉತ್ತಮವಾಗಿ ಆಡಿದ್ದಾರೆ. ಬೌಲರ್‌ಗಳೂ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.ಭಾರತ ತಂಡವು ಏಕದಿನ ಕ್ರಿಕೆಟ್ ಸರಣಿಯನ್ನು 2–1ರಿಂದ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.