ನೋಯ್ಡ: ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಅಮಿತ್ ಧನ್ಕಾರ್ ಅವರು ಪುರುಷರ ಫ್ರೀಸ್ಟೈಲ್ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಶನಿವಾರ ನಡೆದ ಸ್ಪರ್ಧೆಯ 74 ಕೆಜಿ ವಿಭಾಗದಲ್ಲಿ ಅವರು ಹರಿಯಾಣವನ್ನು ಪ್ರತಿನಿಧಿಸಿ ಕಣಕ್ಕೆ ಇಳಿದಿದ್ದರು.
ಎರಡು ದಿನಗಳ ಸ್ಪರ್ಧೆಯ ಮೊದಲ ದಿನ 57, 61, 74, 92 ಮತ್ತು 125 ಕೆಜಿ ವಿಭಾಗಗಳ ಹಣಾಹಣಿಗಳು ನಡೆದವು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ನ (ಎಸ್ಎಸ್ಸಿಬಿ) ಪಂಕಜ್ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಹರಿಯಾಣದ ಅಮನ್ ಬೆಳ್ಳಿ ಪದಕ ಗಳಿಸಿದರೆ ದೆಹಲಿಯ ರಾಹುಲ್ ಮತ್ತು ಹರಿಯಾಣದ ಶುಭಂ ಕಂಚಿನ ಪದಕ ಗಳಿಸಿದರು.
61ಕೆಜಿ ವಿಭಾಗದಲ್ಲಿ ಎಸ್ಎಸ್ಸಿಬಿಯ ರವಿಂದರ್ ಚಿನ್ನದ ಪದಕ ಕೊರಳಿಗೇರಿಸಿಕೊಂಡರೆ ಮಹಾರಾಷ್ಟ್ರದ ಸೂರಜ್ಗೆ ಬೆಳ್ಳಿ ಪದಕ ಸಂದಿತು. ರೈಲ್ವೇಸ್ನ ನವೀನ್ ಮತ್ತು ಎಸ್ಎಸ್ಸಿಬಿಯ ಸೋನ್ಬ ತನ್ಜಿ ಕಂಚಿನ ಪದಕ ಗಳಿಸಿದರು. 74 ಕೆಜಿ ವಿಭಾಗದ ಚಿನ್ನ ಪಂಜಾಬ್ನ ಸಂದೀಪ್ ಸಿಂಗ್ ಪಾಲಾಯಿತು. ರೈಲ್ವೇಸ್ನ ಜಿತೇಂದರ್ ಬೆಳ್ಳಿ ಪದಕವನ್ನೂ ಅಮಿತ್ ಮತ್ತು ಹರಿಯಾಣದ ವಿಜಯ್ ಕಂಚಿನ ಪದಕವನ್ನೂ ಗಳಿಸಿದರು.
ರೈಲ್ವೇಸ್ನ ಪ್ರವೀಣ್ 92 ಕೆಜಿ ವಿಭಾಗದ ಚಿನ್ನ ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರದ ಪೃಥ್ವಿರಾಜ್ ಬೆಳ್ಳಿ ಪದಕ ಗಳಿಸಿದರೆ ಪಂಜಾಬ್ನ ಲವ್ಪ್ರೀತ್ ಸಿಂಗ್ ಮತ್ತು ರೈಲ್ವೇಸ್ನ ಗೋಪಾಲ್ ಯಾದವ್ ಕಂಚು ಗಳಿಸಿದರು. 125 ಕೆಜಿ ವಿಭಾಗದ ಚಿನ್ನ ರೈಲ್ವೇಸ್ನ ಸುಮಿತ್ ಗಳಿಸಿದರೆ ಹರಿಯಾಣದ ದಿನೇಶ್ ಧನ್ಕಾರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಹರಿಯಾಣದ ಪ್ರತ್ಯಕ್ಷ್ ಮತ್ತು ರಾಜಸ್ತಾನದ ಅನಿಲ್ ಕುಮಾರ್ ಕಂಚಿನ ಪದಕ ಗಲಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.