ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಈಚೆಗೆ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ನ ಮಿಶ್ರ ಡಬಲ್ಸ್ನಲ್ಲಿ ಚಿನ್ನ ಹಾಗೂ ಮಹಿಳೆಯರ ಡಬಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ಯುವಜನ ಮತ್ತು ಕ್ರೀಡಾ ಸಚಿವ ಜಿ.ಪರಮೇಶ್ವರ ಅವರು ₹33 ಲಕ್ಷದ ಚೆಕ್ ವಿತರಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಶ್ವಿನಿ ಪೊನ್ನಪ್ಪ ಅವರನ್ನು ಗುರುವಾರ ಸನ್ಮಾನಿಸಿ, ‘ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದವರಿಗೆ ₹25 ಲಕ್ಷ, ಬೆಳ್ಳಿ ಗೆದ್ದವರಿಗೆ ₹15 ಲಕ್ಷ ಹಾಗೂ ಕಂಚು ಗೆದ್ದವರಿಗೆ ₹8 ಲಕ್ಷ ನೀಡಲಾಗುತ್ತದೆ. ಒಲಿಂಪಿಕ್ಸ್ಗಾಗಿ ತಯಾರಿ ನಡೆಸುತ್ತಿರುವ ಅಶ್ವಿನಿ, ಚಿನ್ನ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ’ ಎಂದು ಆಶಿಸಿದರು.
ರಾಜ್ಯದ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ ₹ 5 ಕೋಟಿ, ಬೆಳ್ಳಿ ಗೆದ್ದರೆ ₹3 ಕೋಟಿ ಹಾಗೂ ಕಂಚು ಗೆದ್ದರೆ ₹2 ಕೋಟಿ ನೀಡಲಾಗುತ್ತದೆ ಎಂದರು.
‘ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಬದಲಾವಣೆ ತಂದು ಹಿಂದಿನ ಪದ್ಧತಿ ಮುಂದುವರಿಸುತ್ತೇವೆ. ಈ ಮೊದಲು ಕ್ರೀಡಾಪಟುಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಈಗ ಈ ನೇರ ನೇಮಕಾತಿ ಇಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.