ADVERTISEMENT

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಕ್ವಾರ್ಟರ್‌ಫೈನಲ್‌: ಶ್ರೀಕಾಂತ್‌ಗೆ ಸೋಲು

ಭಾರತದ ಹೋರಾಟ ಅಂತ್ಯ

ಪಿಟಿಐ
Published 5 ಏಪ್ರಿಲ್ 2019, 19:03 IST
Last Updated 5 ಏಪ್ರಿಲ್ 2019, 19:03 IST
ಚೆನ್‌ ಲಾಂಗ್‌
ಚೆನ್‌ ಲಾಂಗ್‌   

ಕ್ವಾಲಲಂಪುರ: ರೋಚಕ ಹಣಾಹಣಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಅವರು ಒಲಿಂಪಿಕ್‌ ಚಾಂಪಿಯನ್‌ ಹಾಗೂ ನಾಲ್ಕನೇ ಶ್ರೇಯಾಂಕಿತ ಚೀನಾದ ಚೆನ್‌ ಲಾಂಗ್‌ ವಿರುದ್ಧ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಕ್ವಾರ್ಟರ್‌ ಫೈನಲ್‌ನ ಸಿಂಗಲ್ಸ್‌ ವಿಭಾಗದಲ್ಲಿ ಸೋಲುಂಡಿದ್ದಾರೆ.

8ನೇ ಶ್ರೇಯಾಂಕಿತ ಶ್ರೀಕಾಂತ್‌ ಅವರು ಮೊದಲ ಸುತ್ತಿನ ವಿರಾಮದ ವೇಳೆಗೆ 11–7 ರಿಂದ ಮುನ್ನಡೆ ಕಾಯ್ದುಕೊಂಡಿದ್ದರು. ಈ ಹಂತದಲ್ಲಿ ತಿರುಗೇಟು ನೀಡಿದ ಚೆನ್‌ ಪ್ರಬಲ ಹೋರಾಟ ನೀಡಿದರು. ಒಂದು ಹಂತದಲ್ಲಿ 17–17ರ ಸಮಬಲ ಕಾಯ್ದುಕೊಂಡರು. ಅಂತಿಮವಾಗಿ 18–21ರಿಂದ ಶ್ರೀಕಾಂತ್‌ ಸೋಲೊಪ್ಪಿಕೊಂಡರು.

ಎರಡನೇ ಪಂದ್ಯದ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ ಆರಂಭಿಸಿದ ಶ್ರೀಕಾಂತ್‌ 11–7ರಿಂದ ಮುನ್ನಡೆ ಕಾಯ್ದುಕೊಂಡರು. ಆದರೆ ಕೆಲವೊಂದು ತಪ್ಪುಗಳಿಂದ ಅಂಕ ಕಳೆದುಕೊಂಡರು. ಇದರಿಂದ ಚೆನ್‌ 16–8 ಅಂಕ ಪಡೆದುಕೊಂಡರು.

ADVERTISEMENT

ಮೊದಲ ಪಂದ್ಯದಂತೆ 19–19 ಅಂಕಗಳ ಸಮಬಲ ಕಾಯ್ದುಕೊಂಡರು. ಈ ವೇಳೆ ಬಿರುಸಿನ ಹೊಡೆತದಿಂದ ಆಟವನ್ನು ತಮ್ಮತ್ತ ತಿರುಗಿಸಿದ ಚೆನ್, ಕೊನೆಗೆ 19–21 ರ ಅಂತರದಿಂದ ಗೆಲುವಿನ ನಗೆ ಬೀರಿದರು.

ಆರಂಭಿಕ ಸುತ್ತಿನಲ್ಲಿ ಸಮೀರ್‌ ವರ್ಮಾ ಸೋತ ಬಳಿಕ ಭಾರತದ ಪರ ಶ್ರೀಕಾಂತ್‌ ಮಾತ್ರ ಕಣದಲ್ಲಿದ್ದರು. ಇದೀಗ, ಇವರ ಸೋಲಿನ ಮೂಲಕ ಭಾರತದ ಹೋರಾಟ ಅಂತ್ಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.