ಭುವನೇಶ್ವರ್: ಸೂಪರ್ ಕಪ್ ಫುಟ್ಬಾಲ್ ಟೂರ್ನಿ ಬಹಿಷ್ಕರಿಸಿದ ತಂಡಗಳ ವಿರುದ್ಧ ಕ್ರಮ ಕೈಗೊಳ್ಳದಿರಲು ಐ ಲೀಗ್ ಸಮಿತಿ ಶನಿವಾರ ನಿರ್ಧರಿಸಿದೆ. ವಿವಾದವನ್ನು ಶಿಸ್ತು ಸಮಿತಿಗೆ ವಹಿಸಲು ತೀರ್ಮಾನಿಸಿದೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ರಿಯಲ್ ಕಾಶ್ಮೀರ್ ಮತ್ತು ಮಿನರ್ವಾ ಪಂಜಾಬ್ ತಂಡಗಳ ನಡುವಿನ ಪಂದ್ಯ ವನ್ನು ರದ್ದುಗೊಳಿಸಿದ ಕಾರಣ ಎರಡೂ ತಂಡಗಳಿಗೆ ತಲಾ ಒಂದೊಂದು ಪಾಯಿಂಟ್ ನೀಡುವುದಕ್ಕೂ ನಿರ್ಧರಿಸಲಾಯಿತು. ಫೆಬ್ರುವರಿ ಎಂಟರಂದು ಈ ಪಂದ್ಯ ನಡೆಯಬೇಕಾಗಿತ್ತು.
ಶನಿವಾರದ ಸೂಪರ್ ಕಪ್ ಪಂದ್ಯಕ್ಕೂ ಮೊದಲು ನಡೆದ ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ ಉಪಾಧ್ಯಕ್ಷ ಸುಬ್ರತಾ ದತ್ತಾ ವಹಿಸಿದ್ದರು. ಮಿನರ್ವಾ ಪಂಜಾಬ್, ಗೋಕುಲಂ ಎಫ್ಸಿ ಮತ್ತು ಐಜ್ವಾಲ್ ಎಫ್ಸಿ ತಂಡಗಳು ಅರ್ಹತಾ ಸುತ್ತಿನಿಂದಲೇ ವಾಪಸಾಗಿದ್ದವು. ಚರ್ಚಿಲ್ ಬ್ರದರ್ಸ್, ನೆರೋಕಾ ಎಫ್ಸಿ, ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳು 16ರ ಘಟ್ಟದಿಂದ ಹಿಂದೆ ಸರಿದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.