ADVERTISEMENT

ರಾಷ್ಟ್ರೀಯ ವಿಜ್ಞಾನ ದಿನ: ಸಿ.ವಿ.ರಾಮನ್‌ ತೆರೆದಿಟ್ಟ ಬೆಳಕಿನ ಚದುರುವಿಕೆಯ ಪರಿಣಾಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2022, 6:58 IST
Last Updated 28 ಫೆಬ್ರುವರಿ 2022, 6:58 IST
'ರಾಮನ್‌ ಪರಿಣಾಮ' (ರಾಮನ್‌ ಎಫೆಕ್ಟ್‌) ವಿವರಿಸುತ್ತಿರುವ ವಿಜ್ಞಾನಿ ಸಿ.ವಿ.ರಾಮನ್‌
'ರಾಮನ್‌ ಪರಿಣಾಮ' (ರಾಮನ್‌ ಎಫೆಕ್ಟ್‌) ವಿವರಿಸುತ್ತಿರುವ ವಿಜ್ಞಾನಿ ಸಿ.ವಿ.ರಾಮನ್‌   

ವಿಜ್ಞಾನಿ ಸರ್ ಸಿ.ವಿ.ರಾಮನ್ (ಚಂದ್ರಶೇಖರ ವೆಂಟಕ ರಾಮನ್‌) ಅವರು ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ಪ್ರಕಟಿಸಿದ್ದು 1928ರಲ್ಲಿ. ಅದಕ್ಕಾಗಿ ಪ್ರತಿವರ್ಷ ಫೆಬ್ರುವರಿ 28ರಂದು ದೇಶದಾದ್ಯಂತ 'ರಾಷ್ಟ್ರೀಯ ವಿಜ್ಞಾನ ದಿನ' ಆಚರಿಸಲಾಗುತ್ತಿದೆ. ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಗಳನ್ನು ಗುರುತಿಸುವ ಮತ್ತು ಸ್ಮರಿಸುವ ಪ್ರಯತ್ನ ನಡೆಸಲಾಗುತ್ತಿದೆ. ತಮ್ಮ ಶೋಧಕ್ಕೆ ರಾಮನ್ 1930ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು.

1928ರ ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ.ಸಿ.ವಿ.ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದ್ದರು. ಆ ಸಂಶೋಧನೆ 'ರಾಮನ್‌ ಪರಿಣಾಮ' (ರಾಮನ್‌ ಎಫೆಕ್ಟ್‌) ಎಂದೇ ಜಗತ್ಪ್ರಸಿದ್ಧಿಯಾಗಿದೆ.

ರಾಷ್ಟ್ರೀಯ ವಿಜ್ಞಾನ ದಿನ 2022

ADVERTISEMENT

'ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಯೋಜಿತ ನಡೆ' 2022ರ ರಾಷ್ಟ್ರೀಯ ವಿಜ್ಞಾನ ದಿನದ ವಿಷಯವಾಗಿದೆ.

ವಿಜ್ಞಾನಿಗಳು, ವಿಜ್ಞಾನದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಆ ವಿಚಾರಗಳಲ್ಲಿ ಉತ್ಸಾಹ ಹೊಂದಿರುವವರಿಗೆ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ, ಮಾನವ ಕುಲದ ಏಳಿಗೆಗಾಗಿ ವಿಜ್ಞಾನದ ಬಲವನ್ನು ಬಳಸಲು ಬದ್ಧರಾಗುವಂತೆ ಕರೆ ನೀಡಿದ್ದಾರೆ.

ವಿಜ್ಞಾನ ದಿನ ಆಚರಣೆಯ ಆರಂಭ

ಫೆಬ್ರುವರಿ 28ರಂದು 'ರಾಷ್ಟ್ರೀಯ ವಿಜ್ಞಾನ ದಿನ' ಎಂದು ನಿಗದಿ ಪಡಿಸುವಂತೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು (ಎನ್‌ಸಿಎಸ್‌ಟಿಸಿ) 1986ರಲ್ಲಿ ಸರ್ಕಾರಕ್ಕೆ ಮನವಿ ಮಾಡಿತ್ತು. 1987ರಿಂದ ದೇಶದಾದ್ಯಂತ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನಡೆಯುತ್ತಿದೆ.

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ

ವಿಜ್ಞಾನದ ಕುರಿತು ತಿಳಿವಳಿಕೆ ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಭಾಷಣಗಳು, ಚರ್ಚೆಗಳು, ಕ್ವಿಜ್‌ ಸ್ಪರ್ಧೆಗಳು, ಕಾರ್ಯಾಗಾರ, ವಿಜ್ಞಾನ ಮಾದರಿಗಳ ಪ್ರದರ್ಶನ, ವಿಜ್ಞಾನದ ವಿಷಯಗಳನ್ನು ಒಳಗೊಂಡಿರುವ ಸಿನಿಮಾಗಳು, ರೆಡಿಯೊ ಹಾಗೂ ಟಿವಿ ಕಾರ್ಯಕ್ರಮಗಳ ಮೂಲಕ ವಿಜ್ಞಾನದ ವಿಚಾರಗಳನ್ನು ಪಸರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಹಾಗೂ ವಿಜ್ಞಾನ ಕೇಂದ್ರಗಳು ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ಸರ್ಕಾರಿ ಅಧಿಕಾರಿಯಿಂದ ವಿಜ್ಞಾನಿ...

ಏಷ್ಯಾದ ಮೊದಲ ನೊಬೆಲ್ ಭೌತವಿಜ್ಞಾನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಭಾರತದ ‌ಸಿ.ವಿ.ರಾಮನ್‌. 1888ರ ನವೆಂಬರ್‌ 7ರಂದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ರಾಮನ್‌ ಜನನ. ತಂದೆ ಚಂದ್ರಶೇಖರ್‌ ಅಯ್ಯರ್‌ ಅವರು ಶಾಲೆ ಹಾಗೂ ಕಾಲೇಜಿನಲ್ಲಿ ಗಣಿತ, ಭೌತವಿಜ್ಞಾನ ಕಲಿಸುತ್ತಿದ್ದರು. ರಾಮನ್‌ ಅವರಿಗೆ ತಂದೆಯೇ ಮೊದಲ ಗುರು. ತಂದೆ ಬೋಧಿಸುತ್ತಿದ್ದ ಕಾಲೇಜಿನಲ್ಲಿಯೇ ಶಿಕ್ಷಣ ನಡೆಸಿ, 14ನೇ ವಯಸ್ಸಿನಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ಆರಂಭಿಸಿದರು. ಭೌತವಿಜ್ಞಾನದ ಎಂ.ಎ. ಪದವಿ ಸಹ ಅಲ್ಲಿಯೇ ಮುಂದುವರಿಸಿದರು.

ರಾಮನ್‌ ಅವರ ಆಸಕ್ತಿ ಸಂಗೀತ, ಇತಿಹಾಸ, ವಿಜ್ಞಾನ, ಇಂಗ್ಲಿಷ್‌, ವೇದಾಂತ,..ಹೀಗೆ ಹಲವು ವಿಷಯಗಳಲ್ಲಿ ವಿಸ್ತರಿಸಿಕೊಂಡಿತ್ತು. ಅಖಿಲ ಭಾರತ ಸ್ಪರ್ಧಾ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಗಳಿಸಿಕೊಂಡ ಅವರು 1907ರಲ್ಲಿ ಕೋಲ್ಕತ್ತ(ಆಗಿನ ಕಲ್ಕತ್ತ)ದಲ್ಲಿ ಅಸಿಸ್ಟೆಂಟ್‌ ಅಕೌಂಟ್‌ ಜನರಲ್‌ ಆಗಿ ನೇಮಕಗೊಂಡರು. 1917ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಿಂದ ಪ್ರಾಧ್ಯಾಪಕರಾಗಲು ಆಹ್ವಾನ ಬಂದಿತು. ರಾಮನ್‌ ಸರ್ಕಾರ ನೀಡಿದ್ದ ಅಧಿಕಾರ ಮತ್ತು ಸವಲತ್ತುಗಳನ್ನು ಬದಿಗಿಟ್ಟು ವಿಜ್ಞಾನದ ಕಡೆಗೆ ಮುಖಮಾಡಿದರು.

1933ರಲ್ಲಿ ಕಲ್ಕತ್ತ ಬಿಟ್ಟು ಬೆಂಗಳೂರಿನ 'ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌(ಐಐಎಸ್‌ಸಿ)' ಸೇರಿದರು. 1948ರ ವರೆಗೂ ಐಐಎಸ್‌ಸಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಪಡೆದರು. ಆನಂತರವೇ ಸ್ವಂತ ಪ್ರಯೋಗಾಲಯ ರಾಮನ್‌ ಇನ್‌ಸ್ಟಿಟ್ಯೂಟ್‌ನ್ನು ಕಟ್ಟಿ ಬೆಳೆಸಿದರು. 1970ರ ನವೆಂಬರ್‌ 20ರವರೆಗೂ ಅಲ್ಲಿಯೇ ಸಂಶೋಧನೆಗಳಲ್ಲಿ ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.