ADVERTISEMENT

`ಗಮಕ ನಶಿಸುವ ಕಲೆಯಲ್ಲ'

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST

ಗಮಕ ಕಲೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವ ಪ್ರಸ್ತುತ ದಿನ ಗಳಲ್ಲಿ ಗಮಕವನ್ನು ಹಾಡುತ್ತಲೇ ತಮ್ಮ ಜೀವನವನ್ನು ಕಳೆದು ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿರುವ ಗಂಗಮ್ಮ ಕೇಶವಮೂರ್ತಿ ಅವರು `ಮೆಟ್ರೊ' ದೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಗಮಕದಲ್ಲಿ ಆಸಕ್ತಿ ಬೆಳೆದಿದ್ದು ಹೇಗೆ?
ನನ್ನ ತಂದೆ ಮೇಷ್ಟ್ರು. ಅವರಿಗೆ ಬೇರೆ ಬೇರೆ ಕಡೆಗೆ ವರ್ಗವಾಗುತ್ತಿತ್ತು. ಹೀಗಾಗಿ ಅವರು ಎಲ್ಲಿಗೆ ಹೋದರೂ ಅಲ್ಲಿನ ವಿಶೇಷತೆಯನ್ನು ಗಮನಿಸಿ ಕಲಿತುಕೊಳ್ಳುತ್ತಿದ್ದರು. ಅವರ ವಿಶೇಷ ಆಸಕ್ತಿ ಇದ್ದದ್ದು ಹಾಡುಗಳನ್ನು ಹಾಡುವುದರಲ್ಲಿ. ಶಾಲೆಯಲ್ಲಿನ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರಲ್ಲಿ ಗಮಕವನ್ನು ಹಾಡುವುದು ಹೇಗೆ ಬೆಳೆದು ಬಂದಿತು ಎಂಬುದು ನನಗೆ ತಿಳಿದಿಲ್ಲ. ಆದರೆ, ಅವರಿಗೆ ತಿಳಿದಿದ್ದ ಸಂಗೀತ ಮತ್ತು ಗಮಕ ಕಲೆಯನ್ನು ನನಗೆ ಹೇಳಿಕೊಡುತ್ತಿದ್ದರು. ಇನ್ನು ಅಮ್ಮನಿಗೆ ಸೋಬಾನೆ ಪದ, ತುಳಸಿ ಪದ ಹೀಗೆ ಅನೇಕ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಅಭ್ಯಾಸ. ಅವರಿಗೆ ಸುಮಾರು 2000 ಪದಗಳು ಬಾಯಿಯಲ್ಲಿಯೇ ಇದ್ದವು. ಇದರಿಂದ ನಾನು ಬೆಳೆದ ವಾತಾವರಣದಿಂದ ನನಗೆ ಸಂಗೀತದಲ್ಲಿ ಆಸಕ್ತಿ ಬೆಳೆಯಿತು.

ನೀವು ಯಾರಲ್ಲಿ ಅಭ್ಯಾಸ ಮಾಡಿದ್ರಿ?
ಎಸ್ಸೆಸ್ಸೆಲ್ಸಿ ಮುಗಿದ ನಂತರ ಮನೆಯಲ್ಲಿ ಮದುವೆ ಮಾಡಿದ್ರು. ಆಗ, ಬೆಂಗಳೂರಿನತ್ತ ಪಯಣ. ಆಗ ಮನೆಯಲ್ಲಿ ಕುಳಿತು ಕುಳಿತು ಬೇಸರ. ಏನಾದ್ರೂ ಮಾಡಬೇಕೆಂಬ ಆಸೆಯಿತ್ತು. ಮೊದಲಿಂದ ಕಲಿತ ಸಂಗೀತ ಕೈ ಹಿಡಿಯಿತು. ಅದರಲ್ಲೂ `ಗಮಕ' ಕೈ ಹಿಡಿದು ನಡೆಸಿತು. ನಿರ್ದಿಷ್ಟ ಗುರುಗಳೇ ಬೇಕೆಂದು ಹುಡುಕಲಿಲ್ಲ. ಯಾರಲ್ಲಿ ಕಲಿಯಬಹುದು ಅಂತ ಅನಿಸ್ತೋ ಅವರಲ್ಲಿ ಕಲಿತೆ. ಯಾರು ಚೆನ್ನಾಗಿ ಹಾಡ್ತಾರೆ ಅಂತ ಹೇಳಿದರೋ ಅವರನ್ನೇ ಹುಡುಕಿಕೊಂಡು ಅವರಲ್ಲಿ ಹೋಗಿ ಕಲಿತೆ. ಗಮಕಿಗಳಾದ ಎಂ.ರಾಘವೇಂದ್ರರಾವ್, ನಂ.ಅಶ್ವತ್ಥನಾರಾಯಣ, ಪೇಟೆ ರಾಮಚಂದ್ರಾಚಾರ್, ಬಿಎಸ್‌ಎಸ್ ಕೌಶಿಕ್ ಅವರಲ್ಲಿ ಗಮಕವನ್ನು ಕಲಿತೆ.

ಗಮಕ ಕಲೆಯ ಬಗ್ಗೆಯೇ ಆಸಕ್ತಿ ಯಾಕೆ? ಶಾಸ್ತ್ರೀಯ ಗಾಯನದ ಕಡೆಗೆ ಗಮನ ಹರಿಸಬಹುದಿತ್ತಲ್ಲವೇ?
ಅಭ್ಯಾಸದ ವೇಳೆಯಲ್ಲಿ, ಹಲವು ಜನರು ನಿಮ್ಮ ಧ್ವನಿ ಚೆನ್ನಾಗಿದೆ. ನೀವು ಗಮಕವನ್ನೇ ಹಾಡಿ. ಗಮಕವನ್ನು ಹಾಡಲು ಸೂಕ್ತವಾಗಿದೆ ಎಂದು ಅನೇಕ ಮಂದಿ ನನಗೆ ಸಲಹೆ ನೀಡಿದರು. ಅದರಂತೆ, ಅಭ್ಯಾಸ ಮಾಡಿ ಕಲಿತೆ. ಅದನ್ನೇ ಹಾಡುತ್ತ ಬಂದೆ.

ಇಂದಿನ ಯುವಜನತೆಗೆ ಗಮಕ ಕಲೆಯ ಬಗ್ಗೆ ಆಸಕ್ತಿ ಇದೆಯಾ?
ಆರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯಲು ಬರುತ್ತಿದ್ದರು. ಆದರೆ, ಟೀವಿ ಮತ್ತು ಮೊಬೈಲ್ ಬಂದಂದಿನಿಂದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಗಮಕ ಕಲೆಯಲ್ಲಿ ಆಸಕ್ತಿ ಉಳಿದಿಲ್ಲ. ಅಲ್ಲದೇ, ಬೇರೆ ಎಲ್ಲ ಕಲಿಕೆಯ ಬಗೆಗೂ ಆಸಕ್ತಿ ಕಡಿಮೆಯಾಗಿದೆ. ಇಂದಿನವರು ಹೆಚ್ಚು ಓದುವುದೇ ಇಲ್ಲ. ಆದ್ದರಿಂದ, ಅವರಿಗೆ ಜ್ಞಾನ ಕಡಿಮೆಯಾಗಿದೆ.

ಗಮಕಗಳನ್ನು ಹಾಡುವಾಗ ಏನು ಅನಿಸುತ್ತದೆ?
ಗಮಕದಲ್ಲಿ ಒಂದರಿಂದ ಮೂರು ಪಾತ್ರಗಳಿರುತ್ತವೆ. ಆ ಮೂರು ಪಾತ್ರಗಳೇ ನಾವಾಗಬೇಕು. ಯಾವುದನ್ನೇ ಆಗಲಿ ಮನಸ್ಸಿನಿಂದ ಪೂರ್ಣಪ್ರಮಾಣವಾಗಿ ಅನುಭವಿಸಬೇಕು. ನಾವೇ ಆ ಪಾತ್ರಗಳಲ್ಲಿ ಒಂದಾಗಿ ಹೋದರೆ ಮಾತ್ರ ಸಾಧ್ಯವಾಗುತ್ತದೆ. ಅದನ್ನು ಸಾಧಿಸಲು ಅತಿ ಹೆಚ್ಚು ಓದಬೇಕು. ಓದಿ ಅಥವಾ ಅನುಭವದಿಂದ ತಿಳಿದಿದ್ದರಿಂದ ಮಾತ್ರ ಯಾವುದೇ ಪಾತ್ರದಲ್ಲಿ ಒಂದಾಗಲು ಸಾಧ್ಯವಾಗಿದೆ.

ಗಮಕ ಸಮ್ಮೇಳನಾಧ್ಯಕ್ಷೆಯಾಗಿ ಏನು ಹೇಳಲು ಬಯಸುತ್ತೀರಿ?
ಸಮ್ಮೇಳನಾಧ್ಯಕ್ಷೆಯಾಗಿರುವುದು ಸಂತೋಷ ತಂದಿದೆ. ಸಂತೋಷಕ್ಕಿಂತ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಬರೀ ಭಾಷಣ ಮಾಡುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಕೆಲಸ ಮಾಡಬೇಕು.

ಯುವಜನತೆಯಲ್ಲಿ ಗಮಕ ಕಲೆಯ ಬಗ್ಗೆ ಆಸಕ್ತಿ ಬೆಳೆಯಲು ಏನು ಮಾಡಬೇಕು?
ಶಾಲೆಯಲ್ಲಿ ಪಠ್ಯಕ್ರಮದಲ್ಲಿ ಸೇರಿಸಬೇಕು. ಇದಕ್ಕಾಗಿ ವಿಶೇಷ ಪಠ್ಯಕ್ರಮ ಅಳವಡಿಸುವುದು ಬೇಕಿಲ್ಲ. ಶಾಲೆಗಳಲ್ಲಿರುವ ಪದ್ಯಗಳನ್ನೇ ಗಮಕಗಳಂತೆ ಹೇಳಲು ಅಭ್ಯಾಸ ನಡೆಸಬೇಕು. ಆಗಲೇ ನಮ್ಮ ಗಮಕ ಕಲೆಯು ಉಳಿಯಲು ಸಾಧ್ಯ.

ಗಮಕಕ್ಕೆ ಭವಿಷ್ಯವಿದೆಯೇ? 
ಗಮಕ ನಶಿಸಿ ಹೋಗುವಂತಹ ಕಲೆಯಲ್ಲ. ಆದರೆ, ಇದನ್ನು ಶಾಲೆಯಿಂದಲೇ ಕಡ್ಡಾಯ ಮಾಡಬೇಕು. ಆಗ ಗಮಕ ಕಲೆಯು ಉಳಿದು ಬೆಳೆಯುತ್ತದೆ.

ಗಮಕ ಪ್ರಾಚೀನ ಕಾವ್ಯಗಳನ್ನೇ ಅವಲಂಬಿಸಬೇಕು, ಆಧುನಿಕ ಕವನಗಳನ್ನು ಗಮಕಕ್ಕೆ ಅಳವಡಿಸಲು ಸಾಧ್ಯವೇ? ಸಾಧ್ಯವಾದರೆ

ಯಾವುದಾದರೂ ಪ್ರಯೋಗ ಮಾಡಿದ್ದಾರೆಯೇ?
ನಾನು ಅದೇ ಪ್ರಯೋಗಗಳನ್ನು ಮಾಡಿಕೊಂಡು ಬಂದಿದ್ದೇನೆ. ಹಳಗನ್ನಡ, ನಡುಗನ್ನಡ ಮತ್ತು ಆಧುನಿಕ ಕನ್ನಡ ಕಾವ್ಯಗಳನ್ನು ಗಮಕಗಳಲ್ಲಿ ಹಾಡುವ ಪ್ರಯೋಗಗಳನ್ನು ಮಾಡಿಕೊಂಡು ಬಂದಿದ್ದೇನೆ. ಆದರೆ, ಇವುಗಳಲ್ಲಿ ಕುಮಾರವ್ಯಾಸನ ನಡುಗನ್ನಡ ತುಂಬ ಇಷ್ಟವಾಗುತ್ತದೆ. ಬೇಗ ಅರ್ಥ ಮಾಡಿಕೊಂಡು ಹೇಳಬಹುದು.
 

ಸಭಾ ಕಾರ್ಯಕ್ರಮದಲ್ಲಿ...
ಕರ್ನಾಟಕ ಗಮಕ ಕಲಾ ಪರಿಷತ್ತು: ಗಾಯನ ಸಮಾಜ, ಕೆ.ಆರ್.ರಸ್ತೆ. ಸಂಜೆ 4ಕ್ಕೆ ಉದ್ಘಾಟನೆ- ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ಸ್ಮರಣ ಸಂಚಿಕೆ ಬಿಡುಗಡೆ- ಸಚಿವ ಗೋವಿಂದ ಕಾರಜೋಳ, ಏಕರೂಪ ಗಮಕ ವಾಚನದ ಸೀಡಿ ಬಿಡುಗಡೆ- ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಅಧ್ಯಕ್ಷತೆ- ಸಾಹಿತಿ ಹಂಪ ನಾಗರಾಜಯ್ಯ, ಸಮ್ಮೇಳನಾಧ್ಯಕ್ಷರಾದ ಗಮಕ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರಿಂದ ಭಾಷಣ. ಸಂಜೆ 6ಕ್ಕೆ `ಕುಮಾರವ್ಯಾಸ ಭಾರತ' ವಾಚನ- ಗಂಗಮ್ಮ ಕೇಶವಮೂರ್ತಿ, ವ್ಯಾಖ್ಯಾನ- ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಸಂಜೆ 7 ದಾಸರ ಪದ-ಭಾವಗೀತೆ, ಸಂಜೆ 7.40ಕ್ಕೆ ನೂಪುರ ಫೈನ್ ಆರ್ಟ್ಸ್ ಅಕಾಡೆಮಿ ಅವರಿಂದ ಕೂಚಿಪುಡಿ ಶಾಸ್ತ್ರೀಯ ಸಂಗೀತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT