-ಸಬಿತಾ ಬನ್ನಾಡಿ
**
ತಿಟ್ಟು ಏರಲು ಹೊರಟು ನಟ್ಟ ನಡು ದಾರಿಯಲಿ
ಬಿಟ್ಟು ಬರುವೆನು ಎಂದು ಹಟವು ಸಲ್ಲ
ಹಿಂದೆ ಬಂದರು ಅಷ್ಟೆ ಮುಂದೆ ಹೋದರು ಅಷ್ಟೆ
ಪಯಣವಲ್ಲದೆ ಬೇರೆ ದಾರಿ ಇಲ್ಲ
ಸವೆದ ಹಾದಿಯ ತುಂಬಾ ಕಲ್ಲುಮುಳ್ಳಿನ ನಂಟು
ಮುಂದೆ ಇದ್ದೀತು ಹೂವ ಕಣಿವೆಯ ಸೊಂಪು
ಸಮೆಸಮೆದು ಜಾರುತಿದೆ ಏಕತಾನದ ರಸ್ತೆ
ಎಡಬಲದಲೆಲ್ಲೆಡೆಯು ತಂತಿಬೇಲಿಯ ಗಂಟು
ಮುರಿಯಬೇಕೆಂಬ ಹೆಬ್ಬಯಕೆಯಬ್ಬರದಿ
ಮೈಯ ಭಾರವ ಬಿಟ್ಟು ತೇಲಿಹೋಗಲಿ ನಾವೆ
ಕಣ್ಣು ಕಾಣದ ಹೊಚ್ಚಹೊಸ ತೀರಸೇರಲಿ
ಇನ್ನು ಹಿಂದಿಲ್ಲ ಏನಿದ್ದರೂ ಮುಂದೆ
ಗಾಡಿ ಹೊರಳಲಿ ಇಳಿಜಾರಲಿ
ಇಳಿಜಾರಿನ ಸೊಗಸು ಮರೆಸೀತು ಏರುಬ್ಬಸದಾಯಾಸ
ದಾಟಿ ಹೋದೀತು ಎಲ್ಲ ಬಂಧದ ಜಾಲಿ.
ಕಣ್ಣು ಕಾಣುವವರೆಗೂ ಬಣ್ಣ ಬಣ್ಣದ
ತಿರುವು ಸಗ್ಗ ಸೊಗದ ಸವಿ ಮನದ ತುಂಬ
ಎತ್ತೆತ್ತ ನೋಡಿದರೂ ಕಣಿವೆಯಗಾಧದ ನೋಟ.
ಕೊಟ್ಟ ಕೊನೆ ಯಾವುದೆಂದರಿಯದ ಮಾಟ
ದೂರದಲ್ಲೆಲ್ಲೋ ಕರುಳ ನೆರಳಿನ ಸಿಳ್ಳಿನಾಟ
ಚೆಲುವ ಬಲೆಯಲ್ಲೂ ಏಕತಾನದಗಾನ
ಹೊತ್ತುತಂದಿತು ಗಾಳಿ ಮತ್ತೆ ಮರುಕದ ಮಾತು
ಮನದ ದಾರಿಯ ಕೊನೆಗೂ ಇದೆ ಪ್ರಪಾತ
ದಾರಿಯಂಚಲಿ ಕುಳಿತ ಮುಪ್ಪು ಮುದುಕಿಯ
ಮುಖದಿ ನೂರು ಗೆರೆಗಳ ಆಟ
ನಕ್ಕು ನುಡಿದಳು ಅವಳು ಸಾಕು ನಿಲ್ಲಿಸು ಓಟ.
ಓಡಿದಷ್ಟೂ ಸಿಕ್ಕೀತು ಹೊಸತೆನಿಸುವ ಬಯಲು.
ಅಲ್ಲಿ ಮತ್ತದೇ ಹಳತುಬೇಲಿ
ಬಯಲ ಆಳದಲೆಲ್ಲ ಮೊಳೆತ ಕಲ್ಲಿನ ತಿವಿತ
ನಗೆ ಬುಗ್ಗೆಯಲಿ ಮಿಂದು ನೇವರಿಸಿ ಮುಖಸವರಿ
ತಗೋ ಇದನು ನಡು
ಎಂದು ನೀಡಿದಳೊಂದು ಬೇಲಿಯಗಿಡ.
ಇದು ನಿನ್ನ ಬಳಿ ಇರಲಿಲ್ಲ. ನಟ್ಟು ನೀರುಣಿಸಿ ನೋಡು.
ಬೇಲಿಗೆ ಬೇಲಿಯೇ ಮೊಳೆತು ಹೂಬಿಟ್ಟು
ನೀಡುವುದು ನಿನಗೆ ನೆಲದಲ್ಲೇ ಕಾಮನಬಿಲ್ಲು
ಮುದುಕಿಯ ಮುಖದ ಒಂದೊಂದು ನಿರಿಗೆಯಲೂ ತಣ್ಣಗೆ ಹರಿವ ನದಿ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.