–ಮಹಮ್ಮದ್ ಶರೀಫ್ ಕಾಡುಮಠ
*
ನಿಶ್ಶಬ್ದ ರಾತ್ರಿಯದು
ಉಸಿರಾಡಿದಂತೆ
ಸದ್ದಿಲ್ಲದೆ ಬೀಸುತ್ತಿದೆ ಗಾಳಿ
ಕಗ್ಗತ್ತಲು
ಒಬ್ಬಂಟಿ ಬೇರೆ
ಇಡೀ ಕತ್ತಲೆಗೆ ಚುಕ್ಕಿಯಿಟ್ಟಂತೆ
ಮೊಬೈಲ್ ಟಾರ್ಚು
ಹೃದಯ ತುಂಬಿಕೊಂಡಿದೆ
ಭಯ ಆತಂಕಗಳಿಂದ
ಏನಾಗುತ್ತದೋ ಯಾರಿಗೆ ಗೊತ್ತು
ಡಾಂಬಾರು ರಸ್ತೆಯಲ್ಲಿ
ಹಿಂದಕ್ಕೋದರೂ ಒಂದೆ
ಮುಂದಕ್ಕೋದರೂ ಒಂದೆ
ಎಂದುಕೊಳ್ಳುತ್ತ
ಚಪ್ಪಲಿಯೊಳಗೆ
ಬೆವೆತಿದೆ ಕಾಲು
ಕೊಲೆ ಅತ್ಯಾಚಾರ
ದರೋಡೆ ಹಲ್ಲೆ
ಹೀಗೆ ಒಂದೊಂದೇ
ಚಿತ್ರಣಗಳಲ್ಲಿ
ಬಲಿಪಶು ತಾನಾಗಬಹುದೋ
ತಲೆ ಗಿರ್ರೆನ್ನುತ್ತದೆ
ಎಂಥಾ ಭಯಾನಕ ರಾತ್ರಿ
ಚಿರ್ ಚಿರ್
ಸಣ್ಣ ಸದ್ದು
ಗಡಿ ಕಾಯುವ ಸೈನಿಕನಂತೆ
ಫುಲ್ ಅಲರ್ಟ್
ಕತ್ತು ಅತಿ ನಿಧಾನವಾಗಿ
ಹಿಂದಕ್ಕೆ ತಿರುಗುತ್ತದೆ
ಅಷ್ಟೇ ನಿಧಾನವಾಗಿ
ಮತ್ತೆ ಮುಂದಕ್ಕೆ
ಆದಷ್ಟು ದೂರಕ್ಕೆ
ಕಣ್ಣುಗಳೋಡುತ್ತವೆ
ಮೊಬೈಲ್ ಟಾರ್ಚು
ಅಲ್ಲಿ ಇಲ್ಲಿ ಅಲ್ಲಿ ಇಲ್ಲಿ
ಎಂದು ಅಂಡಲೆಯುತ್ತದೆ
ಗಾಳಿ ಹೌದೋ ಅಲ್ಲವೋ ಎಂಬಂತೆ
ಒಂಚೂರು ಹೆಚ್ಚು ಬೀಸುತ್ತದೆ
ರಸ್ತೆ ಪಕ್ಕ ಬಿದ್ದಿದ್ದ ತರಗೆಲೆ
ನರ್ತಿಸುವ ಹಂಬಲದೊಂದಿಗೆ
ಪ್ರಯತ್ನ ಮುಂದುವರಿಸುತ್ತದೆ
ಹೃದಯ ಜೋರಾಗಿ ನಗುತ್ತಾ
ನೀನು ಶಬ್ದಕ್ಕೂ ಹೆದರುವೆ
ನಿಶ್ಶಬ್ದಕ್ಕೂ ಹೆದರುವೆ
ಮಾತಿಗೂ- ಮೌನಕ್ಕೂ
ಬದುಕಿನ
ಖಾಲಿತನಕ್ಕೂ- ತುಳುಕಾಟಕ್ಕೂ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.