ನವದೆಹಲಿ: ಇನ್ಫೊಸಿಸ್ ಸಹ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರು ಹೂಡಿಕೆದಾರರ ಜತೆಗೆ ಬುಧವಾರ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಜಾಗತಿಕ ಹೂಡಿಕೆದಾರರ ಜತೆಗೆ ನಡೆಯಲಿದ್ದ ಸಂವಾದವನ್ನು ಮೂರ್ತಿ ಅವರ ಅನಾರೋಗ್ಯದ ಕಾರಣಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮುಂದಿನ ಮಂಗಳವಾರ (ಆ. 29) ಈ ಸಭೆ ನಡೆಯಲಿದೆ. ಬ್ರೋಕರ್ ಇನ್ವೆಸ್ಟಿಕ್ ಇಂಡಿಯಾ ಸಂಘಟಿಸಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ಜಾಗತಿಕ ಹೂಡಿಕೆದಾರರನ್ನು ಉದ್ದೇಶಿಸಿ ಮೂರ್ತಿ ಮಾತನಾಡಲಿದ್ದಾರೆ. ಕಾರ್ಪೊರೇಟ್ ಆಡಳಿತ ಅನುಸರಿಸುವಲ್ಲಿನ ವೈಫಲ್ಯ ಮತ್ತು ಇತರ ಕಾರಣಗಳಿಗಾಗಿ ಮೂರ್ತಿ ಅವರು ನಿರ್ದೇಶಕ ಮಂಡಳಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.
ಸಿಇಒ ವಿಶಾಲ್ ಸಿಕ್ಕಾ ಅವರು ದಿಢೀರಾಗಿ ರಾಜೀನಾಮೆ ನೀಡಿದ ನಂತರ ಮೂರ್ತಿ ಅವರು ಹೂಡಿಕೆದಾರರ ಜತೆ ಇದೇ ಮೊದಲ ಬಾರಿಗೆ ಮಾತನಾಡಲಿದ್ದಾರೆ. ಸಂಸ್ಥೆಯ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹೂಡಿಕೆದಾರರೂ ಕಾತರರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.