ADVERTISEMENT

ಏಳು ಸಾವಿರ ಟನ್ ಬೇಳೆ ಆಮದು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ನವದೆಹಲಿ (ಪಿಟಿಐ): ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ ಒಟ್ಟು 7,500 ಟನ್ ಕಡಲೆ ಮತ್ತು ಮಸೂರ್‌ ಬೇಳೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಮ್ ಪಾಂಡೆ ನೇತೃತ್ವದಲ್ಲಿ ಗುರುವಾರ ನಡೆದ ‘ಬೆಲೆ ಸ್ಥಿರೀಕರಣ ಸಮಿತಿ’ಯ ಆಡಳಿತ ಮಂಡಳಿ ಸಭೆಯಲ್ಲಿ ಬೇಳೆ ಕಾಳುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

‘ಐದು ಸಾವಿರ ಟನ್ ಕಡಲೆ ಮತ್ತು ಎರಡೂವರೆ ಸಾವಿರ ಟನ್ ಮಸೂರ್ ಬೇಳೆ ಆಮದು ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಒಟ್ಟು 46 ಸಾವಿರ ಟನ್ ಬೇಳೆಕಾಳುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಒಪ್ಪಂದ ಆಗಿದ್ದು, ಈವರೆಗೆ 14,321 ಟನ್ ಭಾರತಕ್ಕೆ ಬಂದಿದೆ.

ಬೇಳೆ ಕಾಳುಗಳ ಹೆಚ್ಚುವರಿ ಸಂಗ್ರಹವನ್ನು ಚಿಲ್ಲರೆ ವ್ಯಾಪಾರ ಅಂಗಡಿಗಳ ಮೂಲಕ ಪ್ರತಿ ಕೆಜಿಗೆ ₹ 120 ದರದಲ್ಲಿ ಮಾರಾಟ ಮಾಡಲು ಛತ್ತೀಸಗಡ, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್‌ಗೆ ಪೂರೈಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ತೊಗರಿ ಮತ್ತು ಉದ್ದಿನ ಬೇಳೆಯನ್ನು ಪ್ರತಿ ಕಿಲೋಗೆ ₹ 66ರ ದರದಲ್ಲಿ ಈ ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತದೆ.

ಹೆಚ್ಚುವರಿ ದಾಸ್ತಾನು ರೂಪದಲ್ಲಿ ಈವರೆಗೆ 1.19 ಲಕ್ಷ ಟನ್ ಬೇಳೆಕಾಳುಗಳನ್ನು ಸಂಗ್ರಹಿಸಲಾಗಿದೆ.  ಬೇಳೆಗಳ ಸಂಗ್ರಹ ಜುಲೈವರೆಗೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಎರಡು ವರ್ಷಗಳ ಸತತ ಬರಗಾಲ, ಉತ್ಪಾದನೆ ಕುಸಿತದ ಕಾರಣ ದೇಶದಲ್ಲಿ ಬೇಳೆ ಕಾಳುಗಳ ದರ ಪ್ರತಿ ಕಿಲೋಗೆ ₹198ರ ಆಸುಪಾಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.