ನವದೆಹಲಿ (ಪಿಟಿಐ): ದೇಶದಲ್ಲಿ ಪರ್ಯಾಯ ಅರ್ಥ ವ್ಯವಸ್ಥೆಗೆ ಅವಕಾಶವೇ ಇಲ್ಲ. ಕಪ್ಪುಹಣ ತಡೆಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಪ್ರಾಮಾಣಿಕ ತೆರಿಗೆ ಪಾವತಿದಾರರು ಹೊಸ ಕಾಯ್ದೆಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರಲು ಹೊಸ ಕಾನೂನು ಜಾರಿಗೆ ತರಲಾಗುವುದು. ದೇಶದಲ್ಲಿ ಮುಚ್ಚಿಟ್ಟಿರುವ ಕಪ್ಪುಹಣವನ್ನೂ ಶೋಧಿಸಿ ಹೊರತೆಗೆಯಲಾಗುವುದು ಎಂದು ಸಚಿವ ಜೇಟ್ಲಿ ಸೋಮವಾರ ಇಲ್ಲಿ ಹೇಳಿದರು. ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಹೊಂದಿರುವವರಿಗೆ ಮತ್ತು ತೆರಿಗೆ ವಂಚಕರಿಗೆ ಮಾತ್ರವೇ ಈ ಕಾಯ್ದೆ ಅನ್ವಯಿಸುತ್ತದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವವರು ಹೊಸ ಕಾಯ್ದೆ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದರು.
ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ)ಉನ್ನತ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಲು ಮತ್ತು ಕಪ್ಪು ಹಣದ ಸೃಷ್ಟಿಯನ್ನು ತಡೆಯಲು ಯೋಜನೆ ರೂಪಿಸಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಯು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಕಪ್ಪು ಹಣ ನಿಯಂತ್ರಣ ಪ್ರಯತ್ನದಲ್ಲಿ ಯಶಸ್ಸು ಸಾಧ್ಯ. ಅದರಲ್ಲೂ ಹಿರಿಯ ಅಧಿಕಾರಿಗಳ ಹೆಚ್ಚಿನ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ತೆರಿಗೆಗಳ ಮೂಲ ಮತ್ತು ಸಂಗ್ರಹದ ವ್ಯಾಪ್ತಿ ಹೆಚ್ಚಾದರೆ, ಸರ್ಕಾರ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ನೀಡುವ ವಿನಾಯ್ತಿಯಲ್ಲಿಯೂ ಏರಿಕೆ ಆಗಲಿದೆ. -ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.