ಮಂಗಳೂರು: ಕರ್ಣಾಟಕ ಬ್ಯಾಂಕ್ ಪಿಎನ್ಬಿ ಮೆಟ್ಲೈಫ್ ವಿಮಾ ಕಂಪೆನಿ ಜೊತೆಗಿನ ಪಾಲುದಾರಿಕೆ ವಹಿವಾಟು 15 ವರ್ಷ ಪೂರ್ಣಗೊಳಿಸಿರುವ ಕಾರಣಕ್ಕಾಗಿ ಒಂದೇ ಕಂತಿನಲ್ಲಿ ಗ್ರಾಹಕರ ಸಾಲದ ಸಂಪೂರ್ಣ ಮೊತ್ತಕ್ಕೆ ವಿಮೆ ಸೌಲಭ್ಯ ಕಲ್ಪಿಸುವಂತಹ ‘ಮೆಟ್ ಲೋನ್ ಆ್ಯಂಡ್ ಲೈಫ್ ಸುರಕ್ಷಾ’ (ಎಂಎಲ್ಎಲ್ಎಸ್) ಎಂಬ ಹೊಸ ವಿಮೆ ಪಾಲಿಸಿ ಆರಂಭಿಸಿದೆ.
ಹೊಸ ಪಾಲಿಸಿಗೆ ಪೂರಕವಾಗಿ ಗ್ರಾಹಕರ ಸಾಲದ ಮೊತ್ತಕ್ಕೆ ಅನುಗುಣವಾಗಿ ವಿಮಾ ಕಂತನ್ನು ಲೆಕ್ಕ ಹಾಕಲು ಬ್ಯಾಂಕ್ ನೌಕರರಿಗೆ ಅನುಕೂಲವಾಗುವಂತೆ ‘ಕೆಬಿಎಲ್ ಎಂಎಲ್ಎಲ್ಎಸ್’ ಎಂಬ ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗಿದೆ.
ಎಂಎಲ್ಎಲ್ಎಸ್ ವಿಮಾ ಪಾಲಿಸಿ ಮತ್ತು ಮೊಬೈಲ್ ಅಪ್ಲಿಕೇಷನ್ಗಳನ್ನು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಮತ್ತು ಪಿಎನ್ಬಿ ಮೆಟ್ಲೈಫ್ ಬ್ಯಾಂಕ್ ವಿಮೆ ವಿಭಾಗದ ನಿರ್ದೇಶಕ ಸಮೀರ್ ಬನ್ಸಲ್ ಮಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
‘ಕರ್ಣಾಟಕ ಬ್ಯಾಂಕ್ ಮತ್ತು ಪಿಎನ್ಬಿ ಮೆಟ್ಲೈಫ್ 15 ವರ್ಷಗಳ ಯಶಸ್ವಿ ಪಾಲುದಾರಿಕೆ ವಹಿವಾಟು ಪೂರ್ಣಗೊಳಿಸಿವೆ. ಈ ನೆನಪಿಗಾಗಿ ಆರಂಭಿಸಿರುವ ಎಂಎಲ್ಎಲ್ಎಸ್ ಪಾಲಿಸಿಯು ಸಾಲದ ಮೊತ್ತಕ್ಕೆ ಸಂಪೂರ್ಣ ರಕ್ಷಣೆ ಒದಗಿಸಲಿದೆ.
ನಮ್ಮ ಎಲ್ಲ ಗ್ರಾಹಕರೂ ಈ ಪಾಲಿಸಿಯನ್ನು ಖರೀದಿಸುವ ಮೂಲಕ ತಮ್ಮ ಸಾಲದ ಮೊತ್ತಕ್ಕೆ ರಕ್ಷಣೆ ಒದಗಿಸಬೇಕು. ಇದರಿಂದ ಅವರ ಕುಟುಂಬದ ಸದಸ್ಯರನ್ನು ಸಾಲದ ಹೊರೆಯಿಂದ ಮುಕ್ತಗೊಳಿಸಲು ಸಾಧ್ಯವಿದೆ’ ಎಂದು ಮಹಾಬಲೇಶ್ವರ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.