ನವದೆಹಲಿ : ಶೇಂಗಾಎಣ್ಣೆ, ಎಳ್ಳೆಣ್ಣೆ ಮತ್ತು ಸೋಯಾಬೀನ್ ಒಳಗೊಂಡು ಕೆಲವು ನಿರ್ದಿಷ್ಟ ಖಾದ್ಯತೈಲಗಳ ಸಗಟು ರಫ್ತು ಮೇಲೆ ವಿಧಿಸಿದ್ದ ನಿಷೇಧವನ್ನು ಕೈಬಿಡಲಾಗಿದೆ.
ಬೆಲೆ ಏರಿಕೆ ನಿಯಂತ್ರಿಸುವ ಉದ್ದೇಶದಿಂದ 2008ರಲ್ಲಿ ಭಾರಿ ಪ್ರಮಾಣದಲ್ಲಿ ಖಾದ್ಯತೈಲ ರಫ್ತು ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು. ರೈತರ ಅನುಕೂಲ ಮತ್ತು ದೇಶಿ ಸಂಸ್ಕರಣಾ ಉದ್ಯಮ ಉತ್ತೇಜಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ತಿಳಿಸಿದೆ.
2016–17ರ ಬೆಳೆ ವರ್ಷದಲ್ಲಿ (ಜುಲೈ–ಜೂನ್ ಅವಧಿ) 33 ಕೋಟಿ ಟನ್ ದಾಖಲೆ ಪ್ರಮಾಣದಲ್ಲಿ ಎಣ್ಣೆಕಾಳು ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. ಹೀಗಾಗಿ ರಫ್ತು ನಿಷೇಧ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸದ್ಯ, ಪ್ರತಿ ಒಂದು ಟನ್ಗೆ ₹58,500ರಂತೆ ಕನಿಷ್ಠ ರಫ್ತು ದರ ಇದೆ. ‘ಸದ್ಯ, ಕೇವಲ 25 ಸಾವಿರ ಟನ್ ರಫ್ತು ಮಾಡಲಾಗುತ್ತಿದೆ. ಈಗ ಹೆಚ್ಚು ರಫ್ತು ಅವಕಾಶ ನೀಡಿದ್ದರಿಂದ ಇನ್ನೂ 20 ರಿಂದ 30 ಸಾವಿರ ಟನ್ ಹೆಚ್ಚು ರಫ್ತು ಸಾಧ್ಯ’ ಎಂದು ಖಾದ್ಯತೈಲ ಸಂಸ್ಕರಣಾ ಒಕ್ಕೂಟದ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.