ನವದೆಹಲಿ: ದೇಶವ್ಯಾಪಿ ಏಕರೂಪ ತೆರಿಗೆ ವ್ಯವಸ್ಥೆ ಜಾರಿ ನಿಟ್ಟಿನಲ್ಲಿ ತರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೇಂದ್ರ ಸರ್ಕಾರದ ಬಹು ದೊಡ್ಡ ಸಾಧನೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಬಣ್ಣಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರು ವರ್ಷಗಳ ಸಾಧನೆಯ ಪಟ್ಟಿಯಲ್ಲಿ ಜಿಎಸ್ಟಿ ಮೊದಲ ಸ್ಥಾನದಲ್ಲಿದೆ ಎಂದು ಅಸೋಚಾಂ ವರದಿ ಹೇಳಿದೆ.
ಚಿಲ್ಲರೆ ಮತ್ತು ಸಗಟು ಹಣದುಬ್ಬರ ನಿಯಂತ್ರಣ, ಹಣಕಾಸು ಒಳಗೊಳ್ಳುವಿಕೆ, ಡಿಜಿಟಲೀಕರಣ, ರೈಲು ಮತ್ತು ಇಂಧನ ವಲಯಗಳಲ್ಲಿ ಹೂಡಿಕೆ ಮುಂತಾದವು ಸರ್ಕಾರದ ಸಾಧನೆಯ ಪಟ್ಟಿಯಲ್ಲಿರುವ ಇತರ ಕ್ಷೇತ್ರಗಳಾಗಿವೆ.
‘ಹಣದುಬ್ಬರ ಆರ್ಬಿಐ ನಿಗದಿ ಪಡಿಸಿದ ಶೇ4ರ ಗಡಿಯೊಳಗಿದೆ. ಆರ್ಬಿಐ ಬಡ್ಡಿದರ ತಗ್ಗಿಸಿರುವುದೂ ಸಕಾರಾತ್ಮಕ ಬೆಳವಣಿಗೆ’ ಎಂದು ಅಸೋಚಾಂ ಅಧ್ಯಕ್ಷ ಸಂದೀಪ್ ಜಜೋಡಿಯಾ ಬಣ್ಣಿಸಿದ್ದಾರೆ.
‘ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿಯೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ಇನ್ನೂ ಕೂಡ ಸವಾಲಾಗಿಯೇ ಉಳಿದಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಎನ್ಪಿಎ ಸಮಸ್ಯೆ ನಿವಾರಣೆ, ನಿರ್ಮಾಣ, ರಿಯಲ್ ಎಸ್ಟೇಟ್, ಟೆಲಿಕಾಂ, ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕಿದೆ. ಕೃಷಿ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ‘ಅಸೋಚಾಂ’ ಸಲಹೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.