ಮುಂಬೈ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿ ಇನ್ನೂ ಆರಂಭಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಹೊಸ ವ್ಯವಸ್ಥೆಯ ಅಳವಡಿಕೆ ಇನ್ನೂ ಸರಳವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಭಾರತೀಯ ಬ್ಯಾಂಕ್ಗಳ ಒಕ್ಕೂಟದ 70ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಜಿಎಸ್ಟಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇಂದ್ರ ಮತ್ತು ರಾಜ್ಯಗಳ ಮಧ್ಯ ಒಂದು ವ್ಯವಸ್ಥೆಯನ್ನು ರೂಪಿಸಲಾಗಿದೆ. ದಿನ ನಿತ್ಯದ ಸಮಸ್ಯೆಗಳನ್ನು ಬಗೆ ಹರಿಸಲು ರೂಪಿಸಿರುವ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಜಿಡಿಪಿ ಶೇ 7 ರಷ್ಟು ವೃದ್ಧಿ ನಿರೀಕ್ಷೆ: ‘ಜಿಎಸ್ಟಿ ಜಾರಿಗೂ ಮುನ್ನ ವರ್ತಕರು ತಮ್ಮಲ್ಲಿದ್ದ ಸರಕುಗಳನ್ನು ಖಾಲಿ ಮಾಡಲು ಹೆಚ್ಚು ಆದ್ಯತೆ ನೀಡಿದರು. ಇದರ ಪರಿಣಾಮದಿಂದ ಏಪ್ರಿಲ್–ಜೂನ್ ಅವಧಿಯಲ್ಲಿ ಜಿಡಿಪಿ ಶೇ 5.7ಕ್ಕೆ ಕುಸಿತ ಕಂಡಿದೆ. ನಂತರದ ದಿನಗಳಲ್ಲಿ ತಯಾರಿಕಾ ವಲಯವು ಪ್ರಗತಿ ಹಾದಿಗೆ ಮರಳಲಿದ್ದು, ಜಿಡಿಪಿ ಶೇ 7 ರಷ್ಟು ವೃದ್ಧಿ ಕಾಣಲಿದೆ’ ಎಂದು ಹೇಳಿದ್ದಾರೆ.
‘ದೇಶಿ ಆರ್ಥಿಕತೆ ನಗದಿನ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ, ಉಳಿತಾಯ ಮತ್ತು ವೆಚ್ಚ ಮಾಡುವ ಮನೋಧರ್ಮವನ್ನು ಬದಲಾಯಿಸುವ ಉದ್ದೇಶದಿಂದಲೇ ನೋಟು ರದ್ದತಿ ನಿರ್ಧಾರ ಕೈಗೊಂಡಿತ್ತು’ ಎಂದು ಜೇಟ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.