ADVERTISEMENT

ತೊಗರಿ ಖರೀದಿಗೆ ಚೀಲಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಬೆಂಗಳೂರು: ‘ಒಂದೆಡೆ ಪಶ್ಚಿಮ ಬಂಗಾಳದಿಂದ ಚೀಲಗಳು ಬರುವುದು ತಡವಾಗಿದ್ದು, ಇನ್ನೊಂದೆಡೆ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ತೊಗರಿ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ ವ್ಯಕ್ತಪಡಿಸಿದರು.
 
ವಿಧಾನಸಭೆಯಲ್ಲಿ ಸೋಮವಾರ ಬಿ.ಆರ್‌.ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರ ಗಮನಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು. 
 
‘ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು 118 ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೆ 17.90 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಿದ್ದು, ಇದಕ್ಕಾಗಿ ₹950 ಕೋಟಿ ಖರ್ಚು ಮಾಡಲಾಗಿದೆ’ ಎಂದರು.
 
‘7.5 ಲಕ್ಷ ಕ್ವಿಂಟಲ್‌ ತೊಗರಿ ಉತ್ಪಾದನೆ ಆಗಬಹುದು ಎಂಬ ಅಂದಾಜಿನಿಂದ ಆ ಪ್ರಮಾಣಕ್ಕೆ ತಕ್ಕಷ್ಟು ಖರೀದಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಸದ್ಯ 24 ಲಕ್ಷ ಕ್ವಿಂಟಲ್‌ನಷ್ಟು ತೊಗರಿ ಉತ್ಪಾದನೆಯಾಗಿರುವ ಅಂದಾಜಿದೆ’ ಎಂದು ತಿಳಿಸಿದರು.
 
‘ಪ್ರತಿ ಖರೀದಿ ಕೇಂದ್ರಕ್ಕೆ ನಿತ್ಯ ಸಾವಿರ ಚೀಲಗಳು ಬೇಕು. ಗುಣಮಟ್ಟದ ಆಧಾರದ ಮೇಲೆ ಶ್ರೇಣಿ ನಿರ್ಧರಿಸಲು ತಜ್ಞ ಪರೀಕ್ಷಕರು ಬೇಕು. ಪಶ್ಚಿಮ ಬಂಗಾಳದಿಂದ ಚೀಲಗಳು ಬರುವುದು ತಡವಾಗಿದ್ದರಿಂದ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಆಗಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.