ADVERTISEMENT

ದೂರು ಇತ್ಯರ್ಥಕ್ಕೆ ಇ–ನಿರ್ವಾಣ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ನವದೆಹಲಿ (ಪಿಟಿಐ): ತೆರಿಗೆದಾರರ ಕುಂದುಕೊರತೆ, ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕಾಗಿ ಆದಾಯ ತೆರಿಗೆ ಇಲಾಖೆ ‘ಇ–ನಿರ್ವಾಣ್‌’ ಎಂಬ ಹೊಸ ಅಹವಾಲು ಸಲ್ಲಿಕೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಮರುಪಾವತಿ ಹಾಗೂ ತೆರಿಗೆಗೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳ ಬಗ್ಗೆ ಗ್ರಾಹಕರು ಎಸ್‌ಎಂಎಸ್‌  ಹಾಗೂ ಇ–ಮೇಲ್‌ ಮೂಲಕ ಆನ್‌ಲೈನ್‌ನಲ್ಲಿ ಅಹವಾಲು ಸಲ್ಲಿಸಬಹುದು.

ದೂರು ಸಲ್ಲಿಕೆಗಾಗಿ ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಖುದ್ದಾಗಿ ತೆರಳಬೇಕಿಲ್ಲ. ಆನ್‌ಲೈನ್‌ ಮೂಲಕ ಆದಾಯ ತೆರಿಗೆ ವಿವರ ಸಲ್ಲಿಸುವ ಮಾದರಿಯಲ್ಲಿಯೇ ಗ್ರಾಹಕರು ಒಂದು ಪುಟದ ಮಾಹಿತಿ ನೀಡುವ ಮೂಲಕ ದೂರು ದಾಖಲಿಸಬಹುದು. 

ದೂರು ದಾಖಲಾದ ತಕ್ಷಣ ತೆರಿಗೆ ಇಲಾಖೆ ದೂರುದಾರರಿಗೆ ವಿಶೇಷ ಸಂಖ್ಯೆಯೊಂದನ್ನು ನೀಡುತ್ತದೆ. ಮುಂದಿನ ಎಲ್ಲ ವ್ಯವಹಾರಗಳಿಗೂ ದೂರುದಾರ ಇದೇ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಎಲ್ಲ ಅಂತಿಮ ಸಿದ್ಧತೆ ಅಂತಿಮಗೊಂಡಿದ್ದು ಶೀಘ್ರದಲ್ಲಿಯೇ ಇ–ನಿರ್ವಾಣ್‌ ಸೇವೆಯನ್ನು ತೆರಿಗೆ ಇಲಾಖೆ ಆರಂಭಿಸಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.