ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 79 ಕೋಟಿ ನಿವ್ವಳ ಲಾಭ ಗಳಿಸಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ₹302 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.
ಜೈಪುರ ವಲಯದ ಮೂರು ಶಾಖೆಗಳಲ್ಲಿ ವಂಚನೆ ನಡೆದಿದೆ. ಈ ಮೂರೂ ಶಾಖೆಗಳ ವಹಿವಾಟಿನ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಕಾರಣಕ್ಕಾಗಿ ಪ್ರಸಕ್ತ ತ್ರೈಮಾಸಿಕದ ಸಾಧನೆಯನ್ನು ಹಿಂದಿನ ತ್ರೈಮಾಸಿಕ ಸಾಧನೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.
ಬ್ಯಾಂಕ್ನ ಒಟ್ಟು ವರಮಾನವು ₹6,323 ಕೋಟಿಗಳಿಂದ ₹6,412 ಕೋಟಿಗಳಿಗೆ ಅಲ್ಪ ಏರಿಕೆ ಕಂಡಿದೆ. ಸರಾಸರಿ ಎನ್ಪಿಎ ಶೇ 3.72 ರಿಂದ ಶೇ 7.53ಕ್ಕೆ ಹಾಗೂ ನಿವ್ವಳ ಎನ್ಪಿಎ ಶೇ 2.36 ರಿಂದ ಶೇ 5.04ಕ್ಕೆ ಏರಿಕೆಯಾಗಿದೆ.
₹ 306 ಕೋಟಿ ನಿವ್ವಳ ಲಾಭ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ), ಏಪ್ರಿಲ್– ಜೂನ್ ತ್ರೈಮಾಸಿಕ ಅವಧಿಯಲ್ಲಿ ₹ 306 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 721 ಕೋಟಿಗಳಷ್ಟು ನಿವ್ವಳ ಲಾಭಕ್ಕೆ ಹೋಲಿಸಿದರೆ, ಶೇ 58ರಷ್ಟು ಕುಸಿತ ದಾಖಲಿಸಿದೆ.
ಈ ಹಿಂದಿನ ತ್ರೈಮಾಸಿಕದಲ್ಲಿ ಬ್ಯಾಂಕ್, ₹ 5,367 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿತ್ತು. ವಸೂಲಾಗದ ಸಾಲಗಳಿಗಾಗಿ (ಎನ್ಪಿಎ) ಸದ್ಯಕ್ಕೆ ₹ 3,620 ಕೋಟಿ ತೆಗೆದು ಇರಿಸಲಾಗಿದೆ. ಹಿಂದಿನ ವರ್ಷ ತೆಗೆದು ಇರಿಸಿದ್ದ ₹ 1,291 ಕೋಟಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ.
‘ಒಂದು ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ವಸೂಲಾಗದ ಸಾಲದ ಪ್ರಮಾಣವು ಎರಡು ಪಟ್ಟುಗಳಿಗಿಂತ ಹೆಚ್ಚಾಗಿ, ₹ 56,654 ಕೋಟಿಗಳಿಗೆ ತಲುಪಿದೆ’ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.