ADVERTISEMENT

ಭವಿಷ್ಯ ನಿಧಿ ಬಾಕಿ: ಯುಬಿಎಲ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಕಿಂಗ್‌ಫಿಷರ್ ಏರ್‌ಲೈನ್ಸ್ ತನ್ನ ನೌಕರರಿಗೆ ನೀಡಬೇಕಿದ್ದ ₹ 8.72 ಕೋಟಿ ಪಿಎಫ್ ಬಾಕಿ ಉಳಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇದೀಗ ಸಂಸ್ಥೆಯ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಅಧಿಕಾರಿಗಳಿಂದ ಆ ಹಣ ವಸೂಲಿ ಮಾಡಲು ನಿರ್ಧರಿಸಿದೆ.

‘ಕಿಂಗ್‌ಫಿಷರ್ ಏರ್‌ಲೈನ್ಸ್‌ ಕಂಪೆನಿ ಈಗಾಗಲೇ ಮುಚ್ಚಿ ಹೋಗಿದೆ. ಅದರ ಆಸ್ತಿ ಸಹ ದಿವಾಳಿಯಾಗಿದೆ. ಹೀಗಾಗಿ, ಆ ಸಂಸ್ಥೆಯ ನಿರ್ದೇಶಕರು ಹಾಗೂ ಪಿಎಫ್ ಬಾಕಿ ಉಳಿಸಿಕೊಳ್ಳಲು ಕಾರಣರಾದ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಸಹಾಯಕ ಭವಿಷ್ಯ ನಿಧಿ ಆಯುಕ್ತ ಅಭಿಷೇಕ್ ಗುಪ್ತ ತಿಳಿಸಿದ್ದಾರೆ.

‘ವಿಜಯ್‌ ಮಲ್ಯ ಅವರು ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿದ್ದರು. ಅವರು ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ನ (ಯುಬಿಎಲ್) ಮುಖ್ಯಸ್ಥರಾಗಿದ್ದಾರೆ. ಇನ್ನು ಮುಂದೆ ಮಲ್ಯ ಅವರಿಗೆ ವೇತನ ನೀಡದಂತೆ ಹಾಗೂ ಆ ವೇತನವನ್ನು ತಮ್ಮ ಖಾತೆಗೆ ಜಮೆ ಮಾಡುವಂತೆ ಯುಬಿಎಲ್‌ಗೆ ನೋಟಿಸ್ ಕಳುಹಿಸಿದ್ದೇವೆ. ಆ ಹಣವನ್ನು ಪಿಎಫ್‌ ವಂಚಿತ ನೌಕರರಿಗೆ ನೀಡಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.