ಬೆಂಗಳೂರು: ‘ಮುಂಬರುವ ವರ್ಷಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ₹ 8 ಲಕ್ಷ ಕೋಟಿಗಳಷ್ಟು ಬಂಡವಾಳ ತೊಡಗಿಸಲಾಗುವುದು’ ಎಂದು ಕೇಂದ್ರದ ಭಾರಿ ಕೈಗಾರಿಕಾ ಸಚಿವ ಅನಂತ್ಗೀತೆ ಹೇಳಿದ್ದಾರೆ.
ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಐದು ದಿನಗಳ ಎಕ್ಸ್ಕಾನ್ ಮೇಳವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ‘ನಿರ್ಮಾಣ ಸಲಕರಣೆ ತಯಾರಿಕೆ ಉದ್ದಿಮೆಗೆ ಸರ್ಕಾರ ಎಲ್ಲ ಬಗೆಯ ನೆರವು ನೀಡಲಿದೆ’ ಎಂದೂ ಭರವಸೆ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ‘ಭಾರತದಲ್ಲಿಯೇ ತಯಾರಿಸಿ’ ಪರಿಕಲ್ಪನೆ ಸಾಕಾರಗೊಳಿಸಲು ವಲಯದ ಎಲ್ಲ ಸಂಸ್ಥೆಗಳಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ. ಮೂಲಸೌಕರ್ಯ ವಲಯದಲ್ಲಿನ ಹೂಡಿಕೆ ಹೆಚ್ಚಳದಿಂದ ನಿರ್ಮಾಣ ಸಲಕರಣೆ ತಯಾರಿಕೆ ಉದ್ದಿಮೆಗಳಿಗೆ ಪ್ರಯೋಜನ ಆಗಲಿದೆ. ಭಾರಿ ಯಂತ್ರೋಪಕರಣಗಳ ತಯಾರಿಕೆ ವಲಯಕ್ಕೆ ಉತ್ತೇಜನ ನೀಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದರು.
ಖಾಸಗಿ ಹೂಡಿಕೆ: ‘ಖಾಸಗಿ ವಲಯದ ಬಂಡವಾಳ ಆಕರ್ಷಿಸಲು ಸರ್ಕಾರ ಪೂರಕ ವಾತಾವರಣ ಕಲ್ಪಿಸಬೇಕು. ನಷ್ಟ ಸಾಧ್ಯತೆ ಇಲ್ಲದ, ವ್ಯವಸ್ಥಿತ
ವಾಗಿ ರೂಪಿಸಿದ ಮತ್ತು ವಿವಾದ ಪರಿಹರಿಸಿಕೊಳ್ಳಲು ಪೂರಕ ಪರಿಸರ ಇದ್ದರೆ ಖಾಸಗಿಯವರು ಬಂಡವಾಳ ತೊಡಗಿಸಲು ತಾವಾಗಿಯೇ ಮುಂದೆ ಬರುತ್ತಾರೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಮೂಲಸೌಕರ್ಯ ವಲಯದಲ್ಲಿನ ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ದೀರ್ಘಾವಧಿ ಪ್ರಯೋಜನ ಪರಿಗಣಿಸಿ ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆ ಯೋಜನೆಗಳ ಸ್ವರೂಪ ನಿರ್ಧರಿಸಬೇಕು. ಹಾಗಿದ್ದರೆ ಮಾತ್ರ ಖಾಸಗಿಯವರು ಲಾಭ ಮಾಡಿಕೊಂಡು ಸಂಪತ್ತು ಸೃಷ್ಟಿಸುತ್ತಾರೆ. ಶೇ 8ರಿಂದ 10ರಷ್ಟು ಆರ್ಥಿಕ ವೃದ್ಧಿ ಸಾಧಿಸಲು ನಿರ್ಮಾಣ ವಲಯ ಪ್ರತಿ ವರ್ಷಶೇ 50ರಷ್ಟು ಬೆಳವಣಿಗೆ ದಾಖಲಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.