ಬೆಂಗಳೂರು: ಸಾವಿರಾರು ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಹೈ ಕೋರ್ಟ್ ವಿಭಾಗೀಯ ಪೀಠ ವಾರಂಟ್ ಜಾರಿ ಮಾಡಿದೆ.
ನ್ಯಾಯಾಧೀಕರಣಕ್ಕೆ ನೀಡಿದ್ದ ಭರವಸೆ ಉಲ್ಲಂಘನೆ ಆರೋಪ ಸಂಬಂಧ ವಿಚಾರಣೆಗೆ ಜೂನ್ 1ರಂದು ಹಾಜರುಪಡಿಸುವಂತೆ ಪೀಠ ಶುಕ್ರವಾರ ವಾರಂಟ್ ನೀಡಿತು.
ಮಲ್ಯ ಅವರಿಂದ ₹50 ಲಕ್ಷದ ಮುಚ್ಚಳಿಕೆ ಪಡೆಯುವಂತೆಯೂ ಪೀಠ ಸೂಚಿಸಿತು.
ಸಾಲ ಬಾಕಿ ಸಂಬಂಧ ವಿಜಯ್ ಮಲ್ಯ ವಿರುದ್ಧ ಎಸ್ಬಿಐ ಮತ್ತಿತರ ಬ್ಯಾಂಕುಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಇತ್ತೀಚಿನ ಬೆಳವಣಿಗೆಗಳು:
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧರಿದ್ದೇವೆ ಎಂದು ಬ್ರಿಟನ್ ಸರ್ಕಾರ ಹೇಳಿದೆ. ಐಡಿಬಿಐ ಬ್ಯಾಂಕ್ನಿಂದ ಸಾಲವಾಗಿ ಪಡೆದ ₹900 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದಲ್ಲಿ ಮಲ್ಯ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ಎದುರಿಸಬೇಕಾಗಿದೆ.
ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವ ಗೃಹ ಸಚಿವಾಲಯ, ಮಲ್ಯ ಅವರನ್ನು ವಾಪಸ್ ಕರೆತರುವುದಕ್ಕೆ ಭಾರತ–ಬ್ರಿಟನ್ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದವನ್ನು (ಎಂಎಲ್ಎಟಿ) ಬಳಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿ ಮುಂಬೈನ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿತ್ತು.
ಗೃಹಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಈ ಪತ್ರದ ಬೆನ್ನಲ್ಲೇ ಬ್ರಿಟನ್ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಹಸ್ತಾಂತರಿಸಬೇಕೆಂದು ಬ್ರಿಟನ್ ಭಾರತಕ್ಕೆ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.