ನವದೆಹಲಿ: ಉದ್ದಿಮೆ ಸಂಸ್ಥೆಗಳ ನಿರ್ದೇಶಕ ಮಂಡಳಿಗೆ ನೇಮಕಗೊಳ್ಳುವ ಸ್ವತಂತ್ರ ನಿರ್ದೇಶಕರನ್ನು ಹುದ್ದೆಯಿಂದ ತೆರವುಗೊಳಿಸುವ ಸಂಬಂಧ ಪ್ರವರ್ತಕ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಸರ್ಕಾರ ಕಠಿಣ ನಿರ್ಬಂಧ ವಿಧಿಸಿದೆ.
ಎರಡನೇ ಅವಧಿಗೆ ನೇಮಕಗೊಂಡಿರುವ ಸ್ವತಂತ್ರ ನಿರ್ದೇಶಕರನ್ನು ಇನ್ನು ಮುಂದೆ ಸಂಸ್ಥೆಗಳು ತಮಗಿಷ್ಟ ಬಂದಂತೆ ಕೈಬಿಡುವಂತಿಲ್ಲ. ಈ ಉದ್ದೇ
ಶಕ್ಕೆ ಸಂಸ್ಥೆಗಳು ಷೇರುದಾರರಿಂದ ವಿಶೇಷ ಗೊತ್ತುವಳಿ ಅಂಗೀಕರಿಸಬೇಕಾಗುತ್ತದೆ. ಇಂತಹ ನಿರ್ದೇಶಕರನ್ನು ಹುದ್ದೆಯಿಂದ ತೆರವುಗೊಳಿಸುವ ಮೊದಲು, ಅವರ ಅಭಿಪ್ರಾಯ ಕೇಳಲು ಅವಕಾಶ ನೀಡಬೇಕು ಎಂದು ಕಂಪನಿ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಇಂತಹ ಗೊತ್ತುವಳಿ ಪರ ಶೇ 75ರಷ್ಟು ಷೇರುದಾರರು ಮತ ಚಲಾಯಿಸಬೇಕಾಗಿರುತ್ತದೆ. ಸಾಮಾನ್ಯ ಗೊತ್ತುವಳಿಗೆ ಶೇ 50ರಷ್ಟು ಷೇರುದಾರರು ಸಮ್ಮತಿ ಇದ್ದರೆ ಸಾಕಾಗುತ್ತದೆ.
ಹೊಸ ನಿಯಮ ಜಾರಿಗೆ ಬರುವುದರಿಂದ ನಿರ್ದೇಶಕ ಮಂಡಳಿಯ ಅಧಿಕಾರ ಸಮತೋಲನದಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.
‘ಈ ನಿಯಮ ಜಾರಿಗೆ ತರುವುದರಿಂದ ಕಾರ್ಪೊರೇಟ್ ಆಡಳಿತದಲ್ಲಿ ಸುಧಾರಣೆ ಸಾಧ್ಯವಾಗಲಿದೆ. ಹೀಗಾಗಿ ಇದೊಂದು ಸ್ವಾಗತಾರ್ಹ ಕ್ರಮವಾಗಿದೆ’ ಎಂದು ಸಲಹಾ ಸಂಸ್ಥೆ ಕಾರ್ಪೊರೇಟ್ ಪ್ರೊಫೆಷನಲ್ಸ್ನ ಪಾಲುದಾರ ಅಂಕಿತ್ ಸಿಂಘಿ ಹೇಳಿದ್ದಾರೆ. ಸ್ವತಂತ್ರ ನಿರ್ದೇಶಕರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆಗುತ್ತಿಲ್ಲ.
ಕಂಪನಿಗಳ ಪ್ರವರ್ತಕರು ಇವರ ಕರ್ತವ್ಯಕ್ಕೆ ಅಡ್ಡಿಪಡಸುತ್ತಿದ್ದಾರೆ ಎನ್ನುವ ದೂರುಗಳು ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.