ನವದೆಹಲಿ: ತೆರಿಗೆ ಸಂಪನ್ಮೂಲ ಅಂದಾಜಿಸಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ವರಮಾನ ಹಂಚಿಕೆ ಶಿಫಾರಸು ಮಾಡುವ 15ನೇ ಹಣಕಾಸು ಆಯೋಗ ರಚನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
‘ಆಯೋಗದ ಸದಸ್ಯರು ಮತ್ತು ಶಿಫಾರಸು ಮಾಡಬೇಕಾದ ವಿಷಯಗಳ ಕುರಿತು ಸದ್ಯದಲ್ಲೇ ಅಧಿಸೂಚನೆ ಹೊರಡಿ ಸಲಾಗುವುದು. ಆಯೋಗವು 2020ರ ಏಪ್ರಿಲ್ 1ರ ಮುಂಚೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಾಗುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನದ ಕಲಂ 280ರ ಅನ್ವಯ, ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತಿದೆ. ಈ ಆಯೋಗವು ತೆರಿಗೆ ವರಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡುವ ಸೂತ್ರದ ಕುರಿತು ವರದಿ ನೀಡುತ್ತದೆ. ಆಯೋಗವು ತನ್ನ ವರದಿ ನೀಡಲು ಸಾಮಾನ್ಯವಾಗಿ ಎರಡು ವರ್ಷಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಆಯೋಗವು ಈ ಬಾರಿ ಹೊಸ ತೆರಿಗೆ ವ್ಯವಸ್ಥೆ ಜಿಎಸ್ಟಿಯ ಪರಿಣಾಮಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ.
ಆಯೋಗದ ಅಧ್ಯಕ್ಷ ಹುದ್ದೆಗೆ ಮಾಜಿ ರಾಜ್ಯಸಭಾ ಸದಸ್ಯ ಎನ್. ಕೆ. ಸಿಂಗ್ ಅವರ ಹೆಸರು ಕೇಳಿ ಬರುತ್ತಿದೆ.
14ನೇ ಹಣಕಾಸು ಆಯೋಗವನ್ನು 2013ರ ಜನವರಿಯಲ್ಲಿ ರಚಿಸಲಾಗಿತ್ತು. ಈ ಆಯೋಗದ ಶಿಫಾರಸು 2015ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ ಜಾರಿಯಲ್ಲಿ ಇರಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.