ನವದೆಹಲಿ: ‘ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು (ಎಐ) ನಾಲ್ಕು ಸಂಸ್ಥೆಗಳಾಗಿ ವಿಭಜಿಸಿ ಷೇರು ವಿಕ್ರಯ ಮಾಡಲಾಗುವುದು’ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
‘ಈ ಷೇರುವಿಕ್ರಯ ಪ್ರಕ್ರಿಯೆಯು 2018ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದೂ ಅವರು ಹೇಳಿದ್ದಾರೆ.
‘ಸಂಸ್ಥೆಯ ಪ್ರಮುಖ ವಿಭಾಗಗಳಾದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸಪ್ರೆಸ್ಗಳನ್ನು ಒಂದು ಸಂಸ್ಥೆಯಾಗಿ ಷೇರು ವಿಕ್ರಯ ಮಾಡಲಾಗುವುದು. ಎಂಜಿನಿಯರಿಂಗ್ ಮತ್ತು ವಿಮಾನ ನಿಲ್ದಾಣದಲ್ಲಿನ ಸೇವೆಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು’ ಎಂದು ಸಿನ್ಹಾ ಹೇಳಿದ್ದಾರೆ.
‘ವಿಮಾನಯಾನ ರಂಗವು ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ. ಈ ರಂಗದ ಎಲ್ಲ ಭಾಗಿದಾರರಿಗೆ ಆಕರ್ಷಕ ಅವಕಾಶಗಳು ಕಾದಿವೆ. ಇದರಿಂದ ‘ಎಐ’ ಸಮೂಹದ ಸ್ಪರ್ಧಾತ್ಮಕತೆ ಹೆಚ್ಚಿ ಪ್ರಗತಿಯ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಇದರಿಂದ ಸಂಸ್ಥೆಯ ಸಿಬ್ಬಂದಿಗೆ ಉತ್ತಮ ಭವಿಷ್ಯ ಕಾದಿದೆ’ ಎಂದು ಹೇಳಿದ್ದಾರೆ. ವಿದೇಶಿ ಸಂಸ್ಥೆಗಳು ‘ಎಐ’ನಲ್ಲಿ ಶೇ 49ರಷ್ಟು ಪಾಲು ಬಂಡವಾಳ ಹೊಂದಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅವಕಾಶ ಮಾಡಿಕೊಟ್ಟಿದೆ. ವಿದೇಶಿ ವಿಮಾನ ಯಾನ ಸಂಸ್ಥೆಗಳು, ಭಾರತದ ಪಾಲುದಾರರ ಜತೆ ಸೇರಿಕೊಂಡು ‘ಎಐ’ನಲ್ಲಿ ಪಾಲು ಬಂಡವಾಳ ಖರೀದಿಸಲು ಈಗ ಮಾರ್ಗ ಮುಕ್ತವಾಗಿದೆ. ₹ 52 ಸಾವಿರ ಕೋಟಿಗಳಷ್ಟು ಸಾಲದ ಸುಳಿಗೆ ಸಿಲುಕಿರುವ ’ಎಐ’, ಹಿಂದಿನ ಯುಪಿಎ ಸರ್ಕಾರ ಪ್ರಕಟಿಸಿದ್ದ ಪರಿಹಾರ ಕೊಡುಗೆಯ ನೆರವಿನಿಂದ ಕಾರ್ಯನಿರ್ವಹಿಸುತ್ತಿದೆ. ವಿದೇಶಿ ಮತ್ತು ದೇಶಿ ವಿಮಾನಯಾನ ಸಂಸ್ಥೆಗಳು ‘ಎಐ’ ಖರೀದಿಸಲು ಆಸಕ್ತಿ ತೋರಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.