ADVERTISEMENT

ನಜರಾಪುರ: ಹೆಚ್ಚಿದ ಮಾಲಿನ್ಯ–ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:57 IST
Last Updated 18 ಜುಲೈ 2017, 5:57 IST
ಗುರುಮಠಕಲ್ ಸಮೀಪದ ನಜರಾಪುರ ಗ್ರಾಮದಲ್ಲಿ ಕೊಳಚೆ ನೀರು ಹರಿಯುತ್ತಿರುವುದು
ಗುರುಮಠಕಲ್ ಸಮೀಪದ ನಜರಾಪುರ ಗ್ರಾಮದಲ್ಲಿ ಕೊಳಚೆ ನೀರು ಹರಿಯುತ್ತಿರುವುದು   

ಗುರುಮಠಕಲ್: ಸಮೀಪದ ನಜರಾಪುರ ಗ್ರಾಮದಲ್ಲಿ ಧಬ್ ದಬಿ ಜಲಪಾತ, ಹಸಿರು ಬೆಟ್ಟಗಳು, ಅತ್ಯುತ್ತಮ ಜಲಮೂಲಗಳಿವೆ. ಆದರೆ ಸ್ವಚ್ಛತೆ ಇಲ್ಲದೆ ಗ್ರಾಮ ತಿಪ್ಪೆಗುಂಡಿಯಂತಾಗಿದೆ. ‘ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಇದೇ ಗ್ರಾಮದವರಾಗಿದ್ದರೂ ಗ್ರಾಮದಲ್ಲಿ ಮೂಲ ಸೌಲಭ್ಯಗಳಿಲ್ಲ’ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದ ಮದ್ಯದಲ್ಲಿಯೇ ಕೆಸರು ಗುಂಡಿಗಳಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಜನರೂ ಸ್ವಚ್ಛತೆಯತ್ತ ಗಮನಹರಿಸುತ್ತಿಲ್ಲ.

‘ಪಂಚಾಯಿತಿಯ ಸಿಬ್ಬಂದಿ ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸುತ್ತಿಲ್ಲ. ಇದರಿಂದ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ’ ಎನ್ನುತ್ತಾರೆ ಗ್ರಾಮಸ್ಥ ಸಿದ್ದಣಗೌಡ.
‘ಗ್ರಾಮದ ರಸ್ತೆಯುದ್ದಕ್ಕೂ ತಿಪ್ಪೆಗುಂಡಿಗಳಿವೆ. ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವಿಲ್ಲ. ಗ್ರಾಮದಲ್ಲಿ ವಿದ್ಯುತ್‌ ಸಮಸ್ಯೆ ಇದೆ.

ADVERTISEMENT

ಇದರಿಂದ ಗ್ರಾಮಸ್ಥರು ಕತ್ತಲಲ್ಲಿ ಕಾಲಕಳೆಯುವಂತಾಗಿದೆ. ಇದರಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರುತ್ತಾರೆ.

ಗ್ರಾಮದ ಚರಂಡಿ ಸ್ವಚ್ಛತೆ ಕೈಗೊಳ್ಳಬೇಕು. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕು. ರಸ್ತೆ ಅಭಿವೃದ್ಧಿ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ‘ಚರಂಡಿಯ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿಯ ಕೊರತೆ ಮಧ್ಯೆಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ.

ಗ್ರಾಮಸ್ಥರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗ್ರಾಮಸ್ಥರಲ್ಲಿ  ಜಾಗೃತಿ ಮೂಡಬೇಕು’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಮ್ಮರೆಡ್ಡಿ ತಿಳಿಸಿದರು.
ಮಲ್ಲಿಕಾರ್ಜುನ ಪಾಟೀಲ ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.