ಚಿಕ್ಕೋಡಿ: ತುಂಬಿ ಹರಿಯುತ್ತಿದ್ದ ದೂಧ್ಗಂಗಾ ನದಿಯ ದಡದಲ್ಲಿ ಕೈಕಾಲು ತೊಳೆಯಲು ಹೋದ ನಾಲ್ವರು ಚಿಕ್ಕ ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದನ್ನು ಕಂಡ ಮಹಿಳೆಯೊಬ್ಬಳು ಪ್ರಾಣದ ಹಂಗು ತೊರೆದು ಮಕ್ಕಳ ಪ್ರಾಣ ಕಾಪಾಡಲು ಪ್ರಯತ್ನಿಸಿದ ಘಟನೆ ತಾಲ್ಲೂಕಿನ ಮಲಿಕವಾಡ ಗ್ರಾಮದ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮಲಿಕವಾಡ ಗ್ರಾಮದ ರಾಣಿ ಪರಶುರಾಮ ಕೋಳಿ (13), ದರ್ಶನ ಪರಶುರಾಮ ಕೋಳಿ (9), ಪ್ರತೀಕ್ಷಾ ವಿಜಯ ಮಾನೆ (10), ದೀಕ್ಷಾ ವಿಜಯ ಮಾನೆ (9) ಅವರು ದೂಧ್ಗಂಗಾ ನದಿಪಾತ್ರದಲ್ಲಿರುವ ಮಲ್ಲಿಕಾರ್ಜುನ ಹಾಗೂ ಮಸೋಬಾ ದೇವರ ದರ್ಶನ ಪಡೆಯಲು ಹೋದಾಗ ಪಕ್ಕದಲ್ಲಿ ಹರಿಯುವ ದೂಧ್ಗಂಗಾ ನದಿಯಲ್ಲಿ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಸಿಲುಕಿದ್ದರು.
ಅಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ನೂರ್ಜಹಾನ್ ಮೊಹಸಿನ್ ಅಪರಾಜ ಅವರು ನದಿಯಲ್ಲಿ ಧುಮುಕಿ ಇಬ್ಬರನ್ನು ರಕ್ಷಿಸಿದರು.
ಇನ್ನುಳಿದ ಇಬ್ಬರು ಮಕ್ಕಳನ್ನು ಕಾಪಾಡಲು ಯತ್ನಿಸುತ್ತಿದ್ದಾಗ ಮಕ್ಕಳು ಆಕೆಯ ಕಾಲು ಹಿಡಿದು ಎಳೆದಾಗ ಆಕೆ ಸಹ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇದನ್ನು ಕಂಡ ಗ್ರಾಮ ಪಂಚಾಯ್ತಿ ಸದಸ್ಯ ಅವಿನಾಶ ಖೋತ, ಸಂಜಯ ಇಂಗಳೆ, ಗ್ರಾಮ ಸಹಾಯಕ ಮಹಾದೇವ ಗಜಬರ, ತಾತೋಬಾ ಖೊತ ಅವರು ನದಿಯಲ್ಲಿ ಧುಮುಕಿ ನೂರ್ ಜಹಾನ್ ಹಾಗೂ ಉಳಿದ ಇಬ್ಬರು ಮಕ್ಕಳನ್ನು ರಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.