ADVERTISEMENT

‘ಪರಿಸರ ಉಳಿಸಿ; ನೀರಿನ ಸಮಸ್ಯೆಗೆ ಕೊನೆ ಹಾಡಿ’

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 6:49 IST
Last Updated 22 ಜುಲೈ 2017, 6:49 IST
ವಿಜಯಪುರ ಹೊರ ವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ಬರ ಮುಕ್ತ ಕರ್ನಾಟಕ ಒಂದು ಚಿಂತನೆ’ ಹಾಗೂ ‘ಮುಂಗಾರು ಹಂಗಾಮಿಗಾಗಿ ರೈತ ಜಾಗೃತಿ’ ಕಾರ್ಯಕ್ರಮಕ್ಕೆ ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು
ವಿಜಯಪುರ ಹೊರ ವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ಬರ ಮುಕ್ತ ಕರ್ನಾಟಕ ಒಂದು ಚಿಂತನೆ’ ಹಾಗೂ ‘ಮುಂಗಾರು ಹಂಗಾಮಿಗಾಗಿ ರೈತ ಜಾಗೃತಿ’ ಕಾರ್ಯಕ್ರಮಕ್ಕೆ ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು   

ವಿಜಯಪುರ: ‘ನೀರಿನ ಸಮಸ್ಯೆ ನಿವಾರಣೆಗಾಗಿ ಪರಿಸರ ಬೆಳೆಸುವ ಜತೆಗೆ, ನೀರು ಇಂಗಿಸುವ ಕೆಲಸ ಮಾಡಬೇಕು’ ಎಂದು ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಸಲಹೆ ನೀಡಿದರು. ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ‘ಬರ ಮುಕ್ತ ಕರ್ನಾಟಕ ಒಂದು ಚಿಂತನೆ’ ಹಾಗೂ ‘ಮುಂಗಾರು ಹಂಗಾಮಿಗಾಗಿ ರೈತ ಜಾಗೃತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

‘ದೇಶದಲ್ಲಿ ಆಹಾರ ಉತ್ಪಾದನೆ ನೀರಾವರಿ ಕ್ಷೇತ್ರದಿಂದ ಮತ್ತು 100 ಸೆಂ.ಮೀ.ಗಿಂತಲೂ ಹೆಚ್ಚು ನಿಶ್ಚಿತವಾಗಿ ಮಳೆ ಬೀಳುವ ಪ್ರದೇಶದಿಂದ ಬಂದಿದೆ. ಆದರೆ ಶೇ 70ರಷ್ಟು ಪ್ರತಿಶತ ಖುಷ್ಕಿ ಭೂಮಿಯಿರುವ ರೈತರ ಕೃಷಿಯಲ್ಲಿ ಅಂತಹ ಹೆಚ್ಚಿನ ಬದಲಾವಣೆ ಆಗಿಲ್ಲ. ಇದರಿಂದಾಗಿ ಶೇ 60ರಷ್ಟು ಜನ ಕೃಷಿ ಅವಲಂಬಿತರಾಗಿ ಹಳ್ಳಿಗಳಲ್ಲಿ ವಾಸಿಸುತ್ತಿ ರುವವರ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಇದಕ್ಕೆ ಜಲಕ್ಷಾಮ ಕಾರಣ’ ಎಂದರು.

‘ದೇಶದಲ್ಲಿ ಎಲ್ಲಿಯೂ ನೀರಿನ ಸದ್ಬಳಕೆ ಆಗುತ್ತಿಲ್ಲ. ಹೆಚ್ಚು ನೀರು ಇರು ವವರು ಪೋಲು ಮಾಡುತ್ತಿದ್ದು, ಕಡಿಮೆ ನೀರು ಇರುವವರು ಅಂತರ್ಜಲವನ್ನು ಪೋಲು ಮಾಡುತ್ತಿದ್ದಾರೆ. ಇದರಿಂದ ಬರದಂತಹ ಪರಸ್ಥಿತಿಯನ್ನು ಪ್ರತಿ ವರ್ಷವೂ ನೋಡುತ್ತಿದ್ದೇವೆ. ನೀರನ್ನು ಉಳಿಸುವುದು ಕೇವಲ ರೈತರ ಕೆಲಸವಲ್ಲ. ಪ್ರತಿಯೊಬ್ಬ ನಾಗರಿಕನ ಕೆಲಸ’ ಎಂದು ಹೇಳಿದರು.

ADVERTISEMENT

‘ರೈತರು ಹೊಲಗಳಲ್ಲಿ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ನಿರ್ಮಿಸಿ, ಓಡುತ್ತಿರುವ ನೀರನ್ನು ನಿಲ್ಲಿಸಿ, ಅಲ್ಲಿಯೇ ಇಂಗುವಂತೆ ಮಾಡಬೇಕು. ಗಿಡಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಮೂಲಕ ನೀರಿನ ಸಮಸ್ಯೆ ನಿವಾರಣೆ ಮಾಡಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಪಿ.ಬಿರಾದಾರ ಮಾತ ನಾಡಿ ‘ಜಿಲ್ಲೆಯನ್ನು ಬರದ ಸಮಸ್ಯೆಯಲ್ಲಿ ರಾಜಸ್ಥಾನಕ್ಕೆ ಹೋಲಿಸುವುದು ಒಂದು ವಾಡಿಕೆ. ಈ ಸಮಸ್ಯೆಗೆ ಪರಿಹಾರವೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮರ–ಗಿಡಗಳನ್ನು ಬೆಳೆಯುವುದು. ಪ್ರತಿ ಹನಿ ನೀರನ್ನು ಸಂರಕ್ಷಿಸು ವುದು ರೈತರಿಗಷ್ಟೇ ನಿಯಮಿತ ವಾಗದೆ, ಎಲ್ಲರಿಗೂ ಮನವರಿಕೆಯಾಗ ಬೇಕು. ನೀರಿನ ಭದ್ರತೆ ಇದ್ದರೆ ಆಹಾರ ಭದ್ರತೆ, ಆರೋಗ್ಯ ಭದ್ರತೆ, ಹಣಕಾಸು ಭದ್ರತೆ ಇರಲು ಸಾಧ್ಯ’ ಎಂದರು.

ಸಹ ವಿಸ್ತರಣಾ ನಿರ್ದೇಶಕ ಡಾ.ಐ.ಎಸ್.ಕಟಗೇರಿ, ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ಡಾ.ಮಹಾಂತೇಶ ಬಿರಾದಾರ, ಡಾ.ರಾಜೇಂದ್ರ ಪೊದ್ದಾರ, ಡಾ.ಎಸ್. ಎಂ.ಮಂಟೂರ, ಡಾ.ಮಾಲಬಸರಿ, ಡಾ.ಎಸ್.ಎಂ.ವಸ್ತ್ರದ, ಡಾ.ಕಪಿಲ ಪಾಟೀಲ, ಡಾ.ಎಂ.ಎಸ್.ಶಿರಹಟ್ಟಿ ಇದ್ದರು. ಕೃಷಿ ಮಹಾವಿದ್ಯಾಲಯದ ಡೀನ್‌ ಡಾ.ಎನ್.ಕೆ.ಬಿರಾದಾರ ಪಾಟೀಲ ಸ್ವಾಗತಿಸಿದರು. ಡಾ.ಎಸ್.ವೈ.ವಾಲಿ ವಂದಿಸಿದರು.

* *

ರಾಜಸ್ಥಾನದಲ್ಲಿ 20 ವರ್ಷಗಳಿಂದ ಮಾಡುತ್ತಿದ್ದ ಜಲ ಮರು ಪೂರ್ಣ ಕಾರ್ಯದಿಂದ ಸುಮಾರು 1200 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತಿದೆ
ಡಾ.ರಾಜೇಂದ್ರ ಸಿಂಗ್‌
ಜಲತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.