ಬೀದರ್: ‘ಸರ್ವಜನಾಂಗದ ಒಕ್ಕೂಟವೇ ಲಿಂಗಾಯತ ಧರ್ಮ’ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಪಾದಿಸಿದರು. ಬಸವ ದರ್ಶನ ಪ್ರವಚನ ಸಮಿತಿ ವತಿಯಿಂದ ನಗರದ ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಡಿಸೆಂಬರ್ 10 ರ ನಡೆಯಲಿರುವ ‘ಬಸವ ದರ್ಶನ’ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಧರ್ಮ ಇರುವುದು ಭಕ್ತರಿಗೆ ಹೊರತು ಕಾವಿ ಬಟ್ಟೆ ಧರಿಸಿದವರಿಗೆ ಅಲ್ಲ, ಲಿಂಗಾಯತ ಧರ್ಮವು ಭಕ್ತರನ್ನೇ ದೇವರನ್ನಾಗಿ ಕಂಡಿದೆ. ಹೀಗಾಗಿ ಅದು ಸರ್ವ ಶ್ರೇಷ್ಠ ಧರ್ಮವಾಗಿದೆ’ ಎಂದು ಹೇಳಿದರು.
‘ಜಗತ್ತಿನಲ್ಲಿ ಅನೇಕ ಧರ್ಮಗಳು ಹಾಗೂ ಸಿದ್ಧಾಂತಗಳು ಇವೆ. ಚರ್ಚೆ ಮಾಡುವ ಮೂಲಕ ಅವುಗಳ ಸಾರಂಶಗಳನ್ನು ಅರಿತುಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.
‘ಮಠಾಧೀಶರು ಮೊದಲು ಮಠಾಧೀಶರಿಗೆ ಬಸವ ಧರ್ಮವನ್ನು ಸರಿಯಾಗಿ ಪರಿಚಯಿಸಬೇಕಾಗಿದೆ’ ಎಂದು ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ದರಾಮ ಶರಣರು ಬೆಲ್ದಾಳ ಸಲಹೆ ಮಾಡಿದರು.
‘ಬಸವಣ್ಣವರನ್ನು 12ನೇ ಶತಮಾನದ ಭಾನು ಎಂದು ಬಣ್ಣಿಸಿದರು. ಮನುಕಲದ ಕಲ್ಯಾಣವನ್ನೇ ಬಯಸಿದ ಅವರು ಪ್ರತಿಪಾದಿಸಿದ ತತ್ವ ವಿಚಾರಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.
‘ಪ್ರವಚನ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಮಾತ್ರ ಸಮಾಜ ಜಾಗೃತಿ ಆಗುತ್ತದೆ. ಆದರೆ, ಇತ್ತಿಚೀನ ದಿನಗಳಲ್ಲಿ ಪ್ರವಚನಗಳು ಹೆಚ್ಚಾಗಿ ನಡೆಯದ ಕಾರಣ ಬಸವ ತತ್ವದ ಬಳ್ಳಿ ಬೆಳೆಯುವುದು ನಿಂತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಬಸವಣ್ಣ ಅಂದರೆ ಪ್ರೇಮ, ಅದು ಆಂತರಿಕವಾಗಿ ಹಾಗೂ ಬಾಹ್ಯವಾಗಿಯೂ ವಿಸ್ತಾರಗೊಳ್ಳಬೇಕಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.